ವಿಜಯಪುರ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರಿಗೆ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಏ. 28ರಂದು ಮಧ್ಯಾಹ್ನ 12.30ರ ಸುಮಾರಿಗೆ ಮದುವೆ ಕಾರ್ಯ ಮುಗಿಸಿಕೋಂಡು ಕಾರ್ನಲ್ಲಿ ಹೊರಡುತ್ತಿದ್ದ ಸುನೀಲಗೌಡರ ಕಾರ್ ಗೆ ಅಡ್ಡಲಾಗಿ ಕಾರ್ ನಿಲ್ಲಿಸಿದ್ದ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ.
ಏನಿದು ಘಟನೆ?
ವಿಜಯಪುರದ ಚಾಲುಕ್ಯ ನಗರದ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸುನೀಲಗೌಡರು ಕಾರ್ನಲ್ಲಿ ವಾಪಸ್ ಆಗುತ್ತಿದ್ದರು. ಇವರ ಜೊತೆಗೆ ಗನ್ ಮ್ಯಾನ್ ವಿಶ್ವನಾಥ ಗಣೇಶನವರ ಹಾಗೂ ಶ್ರೀಶೈಲ ರಡ್ಡಿ ಕೂಡ ಇದ್ದರು. ಕಾರ್ಗೆ ಅಡ್ಡಲಾಗಿ ಓರ್ವ (ಸರ್ದಾರ್ ಜಿ) ಕಾರ್ ನಿಲ್ಲಿಸಿದ್ದನ್ನು ಕಂಡ ಸುನೀಲಗೌಡರು ಕಾರ್ಗೆ ದಾರಿ ಬಿಡು ಅಂದಾಗ ಅದರಲ್ಲಿದ್ದ ವ್ಯಕ್ತಿ “ನನಗೇ ಯಾರು ಅಂತೀಯಾ ಎನ್ನುತ್ತಾ ಅವಾಚ್ಯವಾಗಿ ಮಾತನಾಡಿ ನೀನು ಎಷ್ಟೇ ಪ್ರಭಾವಿ ರಾಜಕಾರಣಿ ಇರು ಆದರೂ ನಿನಗೆ ಬಿಡುವುದಿಲ್ಲʼ ಎಂದನು. ಆಗ ಚಾಲಕ ರಮೇಶ, ಗನ್ಮ್ಯಾನ್ ವಿಶ್ವನಾಥ ಮತ್ತು ಶ್ರೀಶೈಲ ಹೋಗಿ ಅವನನ್ನು ಕಾರ್ನಿಂದ ಬೇರೆ ಕಡೆ ಕಳುಹಿಸಿದರು. ಆಗ ಆತ ಸುನೀಲಗೌಡರನ್ನುದ್ದೇಶಿಸಿ “ಈವಾಗ ಉಳಿದಿದಿಯಾ, ನಿಮ್ಮ ಮನೆಗೆ ಬಂದು ನಿನಗೆ ಖಲ್ಲಾಸ್ ಮಾಡುತ್ತೇನೆʼ ಎಂದು ಹೇಳಿ ಹೋದನು.
ಹೀಗೆ ಸುನೀಲಗೌಡರಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಆತ ವಿಜುಗೌಡ ಪಾಟೀಲರ ಜೊತೆ ಓಡಾಡಿಕೊಂಡಿರುತ್ತಾನೆ. ಇವನ ಮೇಲೆ ಮತ್ತು ಇವನ ಹಿಂದೆ ಯಾರಾದರೂ ಇದ್ದರೆ ಅವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.