ನಿಪ್ಪಾಣಿ: ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂಗೆ ಭಾನುವಾರ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ದೊರೆಯಿತು. ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದ್ದವು. ಅಂಗಡಿ, ಮುಂಗ್ಗಟ್ಟುಗಳು ಬಂದಾಗಿದ್ದವು.
ನಗರದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಸ್ ನಿಲ್ದಾಣ ಆವರಣ, ಜನಸಂದಣಿ ಇರುವ ಹಳೇ ಪಿ.ಬಿ. ರಸ್ತೆ ವಾಹನ, ನಾಗರಿಕರಿಲ್ಲದೆ ಭಣಗುಡುತ್ತಿದ್ದವು. ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೆಲ ಆಸ್ಪತ್ರೆ, ಔಷಧ ಅಂಗಡಿಗಳು, ಪೆಟ್ರೋಲ್ ಬಂಕ್ಗಳು ಸೇವೆಯಲ್ಲಿ ತೊಡಗಿದ್ದವು.
ಸಂಚಾರಕ್ಕೂ ತಟ್ಟಿದ ಬಿಸಿ: ಟೋಲ್ ನಾಕಾದಲ್ಲಿ ನಿತ್ಯ ಓಡಾಡುವ ವಾಹನಗಳಲ್ಲಿ ಶೇ. 5ರಷ್ಟೂ ವಾಹನ ಸಂಚರಿಸಿಲ್ಲ. ಬಹುದೂರದಿಂದ ಮೊದಲಿನಿಂದಲೂ ಪ್ರವಾಸದಲ್ಲಿದ್ದ ಕೆಲವೊಬ್ಬರನ್ನು ಹೊರತುಪಡಿಸಿ ಯಾರೂ ಇತ್ತ ಸುಳಿದಿಲ್ಲ ಎಂದು ತಾಲೂಕಿನ ಕೊಗನೋಳಿ ಟೋಲ್ ನಾಕಾ ವ್ಯವಸ್ಥಾಪಕ ಸದಾಶಿವ ಲಕಡೆ ವಿಜಯವಾಣಿಗೆ ತಿಳಿಸಿದರು.
ಚಪ್ಪಾಳೆ ತಟ್ಟಿದ ನಾಗರಿಕರು: ಸಂಜೆ 5ಕ್ಕೆ ಪ್ರಧಾನಿ ಮೋದಿ ಕರೆ ನೀಡಿದಂತೆ ಕೆಲವು ನಾಗರಿಕರು ಚಪ್ಪಾಳೆ ತಟ್ಟಿದರು. ಕೆಲ ನಾಗರಿಕರು ಶಂಖವನ್ನು ಊದಿದರು, ಕೆಲವರು ಮಂದಿರಗಳಲ್ಲಿ ಘಂಟೆ ಬಾರಿಸಿದರು. ಕೆಲವರು ತಟ್ಟೆಗಳನ್ನು ಬಾರಿಸಿದರು. ದಿನವಿಡೀ ಮನೆಯೊಳಗೆ ಕಳೆದ ಕೆಲವು ಮಕ್ಕಳು ತಟ್ಟೆಗಳನ್ನು ತಟ್ಟುತ್ತ ಆನಂದಪಟ್ಟರು.