More

    ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಮ್ಮೇಳನದ ಭರವಸೆ

    ಕಳಸ: ಜಿಲ್ಲೆಯಲ್ಲಿ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಕಲ್ಪಿಸಿಕೊಡುವುದಾಗಿ ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

    ಇತ್ತೀಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಮಾತನಾಡಿ, ಕಳಸದಲ್ಲಿ ನಡೆದ ಸಮ್ಮೇಳನ ರಾಜ್ಯ ಮಟ್ಟದ ರೀತಿಯಲ್ಲಿತ್ತು. ಸಮ್ಮೇಳನದ ಯಶಸ್ಸಿಗೆ ಸಮಿತಿ ಮಹಾ ಪೋಷಕ ಜಿ.ಭೀಮೇಶ್ವರ ಜೋಶಿ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ. ಬಾಲಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ ಎಂ.ಎ.ಶೇಷಗಿರಿ, ಸಮಿತಿ ಕೋಶಾಧ್ಯಕ್ಷ ಕೆ.ಸಿ.ಧರಣೇಂದ್ರ ಹಾಗೂ ಸಮಾಜದ ಎಲ್ಲ ವರ್ಗದವರ ಸಹಕಾರದಿಂದ ಯಶಸ್ವಿಯಾಯಿತು. ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು ಎಂದು ಶ್ಲಾಘಿಸಿದರು.
    ಸ್ವಾಗತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಅವರಿಗೆ ಅಂತರ ಜಿಲ್ಲಾ ಸಮ್ಮೇಳನದಲ್ಲಿ ನೀಡಲಾದ ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
    ಗೌರವ ಸ್ವೀಕರಿಸಿ ಮಾತನಾಡಿದ ಕೆ.ಕೆ.ಬಾಲಕೃಷ್ಣ ಭಟ್, ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ನಡೆಸುವ ರಾಜ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ಸ್ವಾಗತ ಸಮಿತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.
    ಜಿಲ್ಲಾ ಸಂಚಾಲಕ ಪಾಂಡುರಂಗ ಲೆಕ್ಕಪತ್ರ ಮಂಡಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚೆಕ್, ನಗದು ವಂತಿಗೆ, ಕೂಪನ್ ಮಾರಾಟದಿಂದ 12,07,974 ರೂ. ಸಂಗ್ರಹವಾಗಿದ್ದು, ಸಮ್ಮೇಳನದ ಸ್ವಾಗತ ಸಮಿತಿ ಮೂಲಕ ಅಷ್ಟೂ ಹಣ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
    ಕಳಸ ಕಸಾಪ ತಾಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಹೋಬಳಿ ಅಧ್ಯಕ್ಷ ಶೇಖರ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುಜಯಾ ಸದಾನಂದ, ಕೋಶಾಧಿಕಾರಿ, ಸಮಿತಿ ಕೋಶಾದ್ಯಕ್ಷ ಕೆ.ಸಿ.ಧರಣೇಂದ್ರ, ಕಿರಣ್ ಶೆಟ್ಟಿ, ಪ್ರೇಮ್‌ಕುಮಾರ್, ಎನ್.ಆರ್.ಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್, ಚಿಕ್ಕಮಗಳೂರು ನಗರ ಘಟಕ ಅಧ್ಯಕ್ಷ ಸಚಿನ್ ಹಾಗೂ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts