ಮಂಡ್ಯ: ಕರೊನಾ ಸೋಂಕು ತಗುಲಿ ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ದಾಖಲಾಗಿರುವ ದಾಸನದೊಡ್ಡಿ ಕಾಮೇಗೌಡರಿಗೆ ಆರೈಕೆ ಮಾಡುವವರಿಲ್ಲದೆ ಅನ್ನ-ನೀರು ಸೇವನೆ ತ್ಯಜಿಸಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ದಾಸನದೊಡ್ಡಿ ಗ್ರಾಮದ ಕುಂದನ ಬೆಟ್ಟದ ಬುಡದಲ್ಲಿ ಕೆಲ ಕಟ್ಟೆಗಳನ್ನ ನಿರ್ಮಿಸಿ ಖ್ಯಾತಿ ಗಳಿಸಿರುವ ಕಾಮೇಗೌಡರನ್ನು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ನಡುವೆ ಕಾಲು ಗಾಯವಾಗಿ ನೋವಿನಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ನಿತ್ಯ ಕರೆದುಕೊಂಡು ಬಂದು ವಾಪಸ್ ಮನೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕರೊನಾ ಸೋಂಕು ತಗುಲಿದ್ದು, ಐಸೋಲೇಷನ್ ವಾರ್ಡ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿರಿ 9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!
ಮನೆಯಲ್ಲಿ ಶೌಚಗೃಹ ಸೇರಿ ಎಲ್ಲದಕ್ಕೂ ಮಕ್ಕಳನ್ನೇ ಅವಲಂಬಿಸಿದ್ದ ಕಾಮೇಗೌಡರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿದೆಯಾದರೂ ಇತರ ಕೆಲಸಗಳ ಆರೈಕೆ ಇಲ್ಲದೆ ಸೊರಗಿದ್ದಾರೆ. ಅನ್ನ ಆಹಾರ ಸೇವಿಸಿದರೆ ಶೌಚಗೃಹಕ್ಕೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಆಹಾರ ತ್ಯಜಿಸಿದ್ದಾರೆ. ಅವರ ಇಬ್ಬರು ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಕಾಮೇಗೌಡರನ್ನು ಶೌಚಗೃಹಕ್ಕೆ ಕರೆದೊಯ್ಯಲು ಒಬ್ಬರನ್ನು ನೇಮಕ ಮಾಡುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
”ಕೆರೆ ಕಾಮೇಗೌಡರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅವರ ತುರ್ತು ಚಿಕಿತ್ಸೆಗೆ ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.