ಉಡುಪಿ: ಪವಿತ್ರ ಗುರುವಾರವನ್ನು ಲಾಕ್ಡೌನ್ ಹಿನ್ನೆಲೆಯಲ್ಲಿ ಕ್ರೆಸ್ತರು ಮನೆಯಲ್ಲೇ, ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.
ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಹಿನ್ನೆಲೆಯಲ್ಲಿ ಧರ್ಮಗುರುಗಳು ತಮ್ಮ ಅಧೀನ ಚರ್ಚುಗಳಲ್ಲಿ ಭಕ್ತರ ಅನುಪಸ್ಥಿತಿಯಲ್ಲಿ ಖಾಸಗಿಯಾಗಿ ಬಲಿಪೂಜೆ ನೆರವೇರಿಸಿದರು. ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನಿವಾಸದಲ್ಲಿನ ಪ್ರಾರ್ಥನಾ ಮಂದಿರದಲ್ಲೇ ಖಾಸಗಿಯಾಗಿ ಪ್ರಾರ್ಥನೆ ಸಲ್ಲಿಸಿದರು. 12ಮಂದಿ ಪ್ರೇಷಿತರ (ವಿಶ್ವಾಸಿಗಳು) ಪಾದಗಳನ್ನು ಧರ್ಮಗುರುಗಳು ತೊಳೆಯುವ ವಿಧಿಯನ್ನು ಲಾಕ್ಡೌನ್ ಹಿನ್ನೆಲೆಯಲ್ಲಿ ನಿಷೇಧಿಸಲಾಗಿತ್ತು.
ಗುಡ್ಫ್ರೈಡೆಗೂ ಅನ್ವಯ: ಏಪ್ರಿಲ್ 10ರ ಶುಕ್ರವಾರವನ್ನು ಕ್ರೆಸ್ತರು ಶುಭ ಶುಕ್ರವಾರವಾಗಿ ಧ್ಯಾನ, ಉಪವಾಸ ಹಾಗೂ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸುತ್ತಾರೆ. ಆದರೆ ಈ ಬಾರಿ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಆಚರಿಸುವಂತೆ ಧರ್ಮಾಧ್ಯಕ್ಷರು ಹಾಗೂ ಜಿಲ್ಲಾಡಳಿತ ವಿನಂತಿಸಿದೆ.
ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸರ್ಕಾರ ನಿಷೇಧಿಸಿದ್ದರಿಂದ ಪವಿತ್ರ ವಾರಗಳಲ್ಲಿ ನಡೆಯಬೇಕಾಗಿದ್ದ ಸಾಮೂಹಿಕ ಪ್ರಾರ್ಥನೆ ರದ್ದುಗೊಳಿಸಲಾಗಿದೆ. ಕ್ರೈಸ್ತರು ತಮ್ಮ ಮನೆಯಲ್ಲಿಯೇ ಯೇಸುವನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಬೇಕು.
|ಡಾ.ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಬಿಷಪ್