More

    ಕರೊನಾ ತಡೆಗೆ ಹಳ್ಳಿಗಳು ಲಾಕ್

    ಕುಂದಾಪುರ: ದಿನದಿಂದ ದಿನಕ್ಕೆ ಕರೊನಾ ಪ್ರಕರಣ ಹೆಚ್ಚಿ ಆತಂಕಕ್ಕೊಳಗಾಗಿರುವ ಗ್ರಾಮ ಪಂಚಾಯಿತಿಗಳು ಸ್ವಯಂಪ್ರೇರಿತ ಲಾಕ್ ಒಳಗೆ ಸೇರಿಕೊಳ್ಳುತ್ತಿವೆ. ಕೆಲವು ಗ್ರಾಮಗಳು ಈಗಾಗಲೇ ಲಾಕ್‌ಡೌನ್ ಘೊಷಿಸಿಕೊಂಡಿದ್ದು, ಮತ್ತಷ್ಟು ಗ್ರಾಮಗಳು ಲಾಕ್ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
    ಬೈಂದೂರು ತಾಲೂಕಿನಲ್ಲಿ ಒಟ್ಟು 65 ಗ್ರಾಮಗಳಿದ್ದು, ಸಿದ್ದಾಪುರ, ವಂಡ್ಸೆ, ಇಡೂರು ಕುಂಜ್ಞಾಡಿ, ಆಲೂರು, ಜಡ್ಕಲ್ ಗ್ರಾಮಗಳು ಸ್ವಯಂ ಲಾಕ್‌ಡೌನ್ ಆಗಿವೆ. ಕರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆ ಪರಿಗಣನೆಗೆ ತೆಗೆದುಕೊಂಡು ಗ್ರಾಮ ಪಂಚಾಯಿತಿ ಕೋವಿಡ್ ನಿರ್ಮೂಲನಾ ಕಾರ‌್ಯಪಡೆ ಲಾಕ್‌ಡೌನ್ ನಿರ್ಧಾರಕ್ಕೆ ಬಂದಿದೆ.

    ಹಳ್ಳಿಗರಿಗೆ ಸಮಸ್ಯೆಯಾಗದಂತೆ ಲಾಕ್‌ಡೌನ್ ಮುನ್ನ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಿ ಒಂದು ದಿನ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಮಾಡಿಕೊಟ್ಟು, ನಂತರ ಇಡೀ ಗ್ರಾಮವನ್ನೇ ಲಾಕ್ ಮಾಡಿದ್ದು, ಹೊರಗಿಂದ ಯಾರೂ ಬಾರದಂತೆ, ಒಳಗಿಂದ ಹೊರಗೆ ಹೋಗದಂತೆ ಗ್ರಾಪಂ ಸದಸ್ಯರು, ಟಾಸ್ಕ್‌ಫೋರ್ಸ್ ಸದಸ್ಯರು, ಗ್ರಾಮಸ್ಥರು ರಸ್ತೆಯಲ್ಲಿ ಕಾವಲು ಕೂರುವ ಮೂಲಕ ಲಾಕ್‌ಡೌನ್ ಯಶಸ್ಸಿಗೆ ಪ್ರಯತ್ನಿಸುತ್ತಿದ್ದಾರೆ. ತುರ್ತು ವಿಷಯ ಬಿಟ್ಟರೆ ಮತ್ತಾವುದಕ್ಕೂ ಅವಕಾಶವಿಲ್ಲ.

    ಗ್ರಾಪಂ ಇಟ್ಟ ಹೆಜ್ಜೆ
    ಅಂಗಡಿ ಮಾಲೀಕರಿಗೆ ಗ್ರಾಪಂ ವಿಧಿಸಿದ ನಿಯಮ ಪಾಲಿಸಲು ಸೂಚನೆ, ಹೊರ ಜಿಲ್ಲೆಯಿಂದ ಬಂದವರ ಕರೊನಾ ಟೆಸ್ಟ್, ವ್ಯಾಕ್ಸಿನ್ ಸಂಖ್ಯೆ ಹೆಚ್ಚಳ, ಮನೆಗೆ ತೆರಳಿ ಪರೀಕ್ಷೆ, ಪಂಚಾಯಿತಿ ವ್ಯಾಪ್ತಿ ಪ್ರತಿಯೊಬ್ಬರ ಪರೀಕ್ಷೆ.

    ಹೋಮ್ ಐಸೋಲೇಷನ್ ಇರುವವರ ಮನೆಗಳಿಗೆ ಪ್ರತಿನಿತ್ಯ ಆಶಾ ಕಾರ್ಯಕರ್ತೆ, ಗ್ರಾಪಂ ಸಿಬ್ಬಂದಿ ಭೇಟಿ, ನಿಯಮಿತ ವೈದ್ಯಾಧಿಕಾರಿ, ಆರೋಗ್ಯ ಸಹಾಯಕರು ಭೇಟಿ. ಪಾಸಿಟಿವ್ ಮನೆ ಸೀಲ್‌ಡೌನ್. ಪ್ರತಿ ವಾರ್ಡ್‌ಗೆ ಇಬ್ಬರು ಸ್ವಯಂಸೇವಕರ ನೇಮಕ. ಅವರ ಮೂಲಕ ಪಂಚಾಯಿತಿ ವತಿಯಿಂದ ವಾಹನ ವ್ಯವಸ್ಥೆ ಮಾಡಿ ಪ್ರತಿ ಮನೆಗೆ ಅಗತ್ಯ ವಸ್ತುಗಳ ತಲುಪಿಸುವುದು.

    ಅನಾಥರ ಗುರುತಿಸಿ ಪಂಚಾಯಿತಿ ಮೂಲಕ ಊಟ. ತಂದೆ ತಾಯಿ ಇಬ್ಬರೂ ಪಾಸಿಟಿವ್ ಆಗಿದ್ದು ಮಗು ನೆಗೆಟಿವ್ ಆಗಿದ್ದರೆ ಮಕ್ಕಳ ಆರೈಕೆ ವ್ಯವಸ್ಥೆ. ಮನೆಯಲ್ಲಿ ವ್ಯವಸ್ಥೆ ಇಲ್ಲದವರಿಗೆ ಕೋವಿಡ್ ಕೇರ್ ಸೆಂಟರಿಗೆ ದಾಖಲು. ಅಗತ್ಯ ಬಿದ್ದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್, ಯಾವುದೇ ಸಭೆ ಸಮಾರಂಭಗಳು ನಡೆಯದಂತೆ ನೋಡಿಕೊಳ್ಳುವುದು.

    ಆಲೂರು ಗಣಿಗಾರಿಕೆಗೆ ಬ್ರೇಕ್!
    ಆಲೂರು ಕೆಂಪುಕಲ್ಲು ಗಣಿಗಾರಿಕೆ ಮೂಲಕ ಗುರುತಿಸಿಕೊಂಡಿದ್ದು, ಕೆಂಪು ಕಲ್ಲು ಸಾಗಾಟ ಲಾರಿಗಳು, ಕಾರ್ಮಿಕರು ಎಲ್ಲೆಲ್ಲಿಂದಲೋ ಬರುತ್ತಾರೆ. ಪ್ರತಿದಿನ ನೂರಾರು ವಾಹನ ಅಷ್ಟೇ ಪ್ರಮಾಣದ ಕಾರ್ಮಿಕರು ಆಲೂರಿಗೆ ಬರುತ್ತಾರೆ. ಹಾಗೆ ಹೊರಗಿಂದ ಬಂದವರೂ, ಹೋಮ್ ಕ್ವಾರಂಟೈನ್ ಆದವರು ಎಲ್ಲೆಂದರಲ್ಲಿ ಸುತ್ತುವ ಮೂಲಕ ಆಲೂರು ಕರೊನಾ ಹಾಟ್‌ಸ್ಪಾಟ್ ಮಾಡಿದ್ದು, ಆಲೂರು ಅತೀ ಹೆಚ್ಚು ಪ್ರಕರಣ ದಾಖಲಿಸಿಕೊಂಡ ಗ್ರಾಪಂ. ಗ್ರಾಮದಲ್ಲಿ 150ಕ್ಕೂ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣ, 70 ಸಕ್ರಿಯ ಪ್ರಕರಣ, 4ಜನ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಎಲ್ಲ ಕಲ್ಲುಕ್ವಾರಿ ಚಟುವಟಿಕೆ ಬಂದ್ ಮಾಡಲಾಗಿದೆ.

    ಕರೊನಾಹಳ್ಳಿಯಲ್ಲಿ ಮತ್ತಷ್ಟು ವಿಸ್ತರಿಸದಂತೆ ತಡೆಯುವ ನಿಟ್ಟಿನಲ್ಲಿ ಗ್ರಾಪಂ ಟಾಸ್ಕ್‌ಫೋರ್ಸ್ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ. ಕರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಪಂ ಕಾರ್ಯಪಡೆ ನಿರ್ಣಯದಂತೆ ಈಗಾಗಲೇ ಕೆಲವು ಗ್ರಾಮಗಳು ಲಾಕ್‌ಡೌನ್ ವಿಧಿಸಿಕೊಂಡಿವೆ. ಮತ್ತಷ್ಟು ಇದನ್ನು ಅನುಸರಿಸಿದರೂ ಅಚ್ಚರಿಯಲ್ಲ. ಕರೊನಾ ಪಾಸಿಟಿವ್ ಯಾವ ಗ್ರಾಮದಲ್ಲಿ 21ದಿನಗಳ ಕಾಲ ಕಾಣಿಸಿಕೊಳ್ಳುವುದಿಲ್ಲವೋ ಅಂತಾ ಗ್ರಾಮಗಳಿಗೆ ಬಹುಮಾನ ಕೊಡುವ ಪ್ರಸ್ತಾವನೆ ಕೂಡ ಇದೆ.
    ಕೇಶವ ಶೆಟ್ಟಿಗಾರ್, ಇಒ ಕುಂದಾಪುರ ತಾಲೂಕು ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts