ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ನ್ಯಾಯಾಧೀಶರು ನಿರಂತರವಾಗಿ ಕಲಿಯುತ್ತಿರಬೇಕಾಗುತ್ತದೆ. ವಕೀಲರು ಹೇಳುವ ಸೂಕ್ಷ್ಮಗಳನ್ನು ಗ್ರಹಿಸಬೇಕು. ಸಣ್ಣ ಸಣ್ಣ ವಿಷಯಗಳನ್ನೂ ಗುರುತಿಸಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರಾಜು ಎನ್.ಹೇಳಿದರು.
ವಕೀಲರ ಸಂಘದ ವತಿಯಿಂದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ, ನ್ಯಾಯಿಕ ದಂಡಾಧಿಕಾರಿ ಶ್ವೇತಾಕ್ಷಿ ಅವರಿಗೆ ಕುಂದಾಪುರ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ತಕ್ಷಣದ ಪ್ರತಿಕ್ರಿಯೆ ಕೆಲವೊಂದು ವಿಚಾರದಲ್ಲಿ ಅನಿವಾರ್ಯ. ಅದು ಕಠಿಣತೆ ಎನಿಸಿದರೂ ಪರವಾಗಿಲ್ಲ, ಮೌನವಾಗಿದ್ದರೆ ಅಸಹಾಯಕತೆ ಎಂದು ತಪ್ಪು ಸಂದೇಶ ಹೋಗುವ ಸಂದರ್ಭ ಇರುತ್ತದೆ. ಆದರೂ ವಕೀಲರ ಹಾಗೂ ನ್ಯಾಯಾಧೀಶರಿಗೆ ತಾಳ್ಮೆ ಅಗತ್ಯ ಎಂದರು.
ಉಡುಪಿಗೆ ವರ್ಗವಾದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ, ನ್ಯಾಯಿಕ ದಂಡಾಧಿಕಾರಿ ಶ್ವೇತಾಕ್ಷಿ ಅವರನ್ನು ಸನ್ಮಾನಿಸ ಲಾಯಿತು. ಕುಂದಾಪುರ ವಕೀಲರ ಸಂಘದ ಉಪಾಧ್ಯಕ್ಷ ಸಂದೇಶ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ ಗಿಳಿಯಾರು, ಜತೆ ಕಾರ್ಯದರ್ಶಿ ಗೋವಿಂದ ನಾಯ್ಕ ಜಡ್ಕಲ್, ಖಜಾಂಚಿ ಐ.ನಾಗರಾಜ್ ರಾವ್, ಸರ್ಕಾರಿ ಅಭಿಯೋಜಕಿ ಇಂದಿರಾ ನಾಯಕ್, ಸಹಾಯಕ ಅಭಿಯೋಜಕರಾದ ಉದಯ ಕುಮಾರ್, ಉಮಾ, ವಕೀಲರ ಸಂಘದ ಮಾಜಿ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ನಿರಂಜನ ಹೆಗ್ಡೆ ಎಸ್., ಹಿರಿಯ ವಕೀಲ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ ಹಂದಟ್ಟು ಸ್ವಾಗತಿಸಿ, ಪ್ರಾಸ್ತಾವಿಸಿದರು. ವಕೀಲ ಸಚ್ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.