ಶಿವಮೊಗ್ಗ: ವಿದ್ಯಾರ್ಥಿಗಳು ಏಕಲವ್ಯನಂತೆ ಅಚಲ ಗುರಿ ಹೊಂದಿರಬೇಕು. ಗುರಿ ಸಾಧನೆಗೆ ಸಮರ್ಪಣಾ ಭಾವ ಮತ್ತು ಪರಿಶ್ರಮ ಪಡುವ ಮನೋಭಾವ ಅಳವಡಿಸಿಕೊಳ್ಳಬೇಕು ಎಂದು ಪಿಇಎಸ್ ಶಿಕ್ಷಣ ಸಂಸ್ಥೆ ಟ್ರಸ್ಟಿ ಎಸ್.ವೈ.ಅರುಣಾದೇವಿ ಹೇಳಿದರು.
ಪಿಎಎಸ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ 650ಕ್ಕೂ ಅಧಿಕ ಮಂದಿಗೆ ಆಯ್ಕೆ ಪತ್ರ ವಿತರಿಸಿ ಮಾತನಾಡಿ, ವಿವಿಧ ಕಂಪನಿಗಳಿಗೆ ಆಯ್ಕೆಯಾದವರಿಗೆ ವೃತ್ತಿ ಜೀವನದ ಮೊದಲ ಎರಡು ವರ್ಷಗಳು ಅತ್ಯಂತ ನಿರ್ಣಾಯಕ. ಕಾರ್ಪೋರೇಟ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕಾಲಘಟ್ಟ ಎಂದು ಅಭಿಪ್ರಾಯಪಟ್ಟರು.
ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜಕ ಡಾ. ಆರ್.ನಾಗರಾಜ ಮಾತನಾಡಿ, ಉದ್ಯೋಗ ವಲಯದಲ್ಲಿ ಪ್ರಸ್ತುತ ಇರುವ ಕಠಿಣ ಸವಾಲುಗಳ ನಡುವೆಯೂ 2024ರಲ್ಲಿ ಕೋರ್ಸ್ ಪೂರೈಸಿದ 650ಕ್ಕೂ ಅಧಿಕ ಮಂದಿಗೆ ಅವಕಾಶಗಳು ಸಿಕ್ಕಿರುವುದು ಉತ್ತಮ ಸಾಧನೆ. ಶಿವಮೊಗ್ಗದಲ್ಲಿರುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಬಿ.ಎನ್.ಯುವರಾಜು, ಪಿಇಎಸ್ ಐಎಎಂಎಸ್ ಪ್ರಾಚಾರ್ಯೆ ಎ.ಅರುಣಾ, ಪಿಇಎಸ್ ಪಾಲಿಟೆಕ್ನಿಕ್ ಪ್ರಾಚಾರ್ಯ ಪ್ರೊ. ಜೆ.ಕೆ.ಗೌತಮ್, ಪಿಇಎಸ್ ಟ್ರಸ್ಟ್ ಕೆರಿಯರ್ ಡೆವೆಲಪ್ಮೆಂಟ್ ಸೆಂಟರ್ ಮುಖ್ಯಸ್ಥ ಡಾ. ಟಿ.ಎಂ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಪ್ರತಿಷ್ಠಿತ ಕಂಪನಿಗಳು ಭಾಗಿ: ಈ ವರ್ಷದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಟಿಸಿಎಸ್, ಟಾಟಾ, ಪ್ರಗತಿ ಆಟೋಮೇಷನ್, ಎಟಾನ್ ಸಲ್ಯೂಷನ್ಸ್, ಡಿಎಫ್ಎಂ ಟೆಕ್ನಾಲಜೀಸ್, ಟೊಯೊಟಾ, ಪ್ರೇರಣಾ ಇಂಜಿನಿಯರಿಂಗ್ ವರ್ಕ್ಸ್, ಇಂಡಸ್ ಟವರ್, ಎನ್ವೆಂಚರ್, ಐಟಿಸಿ ಫುಡ್ಸ್, ಓಜಸ್ ಪವರ್, ತ್ರಿವೇಣಿ ಟರ್ಬೈನ್, ಐಡಿಯಾ ಇನ್ಫಿನಿಟಿ , ಎವಿಡೆನ್, ಬೆಟ್ಸಾಲ್, ಡಿ ಮಾರ್ಟ್, ನಿವಾ ಬುಪಾ, ಇಂಡೋ ಎಂಐಎಂ, ಸಂವಿದ್ ಬಿಲ್ಡ್ ಟೆಕ್, ಒರಾಯನ್ ಗ್ರೂಪ್ಸ್, ರೇನಿ ಫಿಲ್ಟರ್ ಕಂಪನಿಗಳು ಭಾಗವಹಿಸಿದ್ದವು.