ನವದೆಹಲಿ: ಸಂಸತ್ ಅಧಿವೇಶನದ ವೇಳೆ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಸದಸ್ಯ ರಮೇಶ್ ಬಿಧೂರಿ ವಿರುದ್ಧ ಸ್ಪೀಕರ್ ಕಠಿಣ ಕ್ರಮ ಜರುಗಿಸದಿದ್ದರೆ ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬಿಎಸ್ಪಿಯ ಡ್ಯಾನಿಶ್ ಅಲಿ ಹೇಳಿದ್ದಾರೆ.
ಚಂದ್ರಯಾನ-3ರ ಕುರಿತು ಸಂಸತ್ ಅಧಿವೇಶನದಲ್ಲಿ ಚರ್ಚೆಯಾಗುತ್ತಿದ್ದ ವೇಳೆ ಮಾತನಾಡಿದ ಸಂಸದ ರಮೇಶ್ ಬಿಧೂರಿ ಡ್ಯಾನಿಶ್ ಅಲಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಡ್ಯಾನಿಶ್ ಅಲಿ ಸಂಸದ ರಮೇಶ್ ಬಿಧೂರಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಲೋಕಸಭೆ ಸ್ಪೀಕರ್ ಓಂ ನಿರ್ಲಾ ಅವರಿಗೆ ಪತ್ರ ಬರೆದಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಅವರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಅವರು ಕ್ರಮಕೈಗೊಳ್ಳದಿದ್ದರೆ ನಾನು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ.
ಇದನ್ನೂ ಓದಿ: ಮೈಸೂರು ದಸರಾ ಅಂದರೆ ಕಾಂಗ್ರೆಸ್ ಸರ್ಕಾರ ಮೂಗು ಮುರಿಯುವುದೇಕೆ: ಬಿಜೆಪಿ
ಸಂಸದ ಬಿಧೂರಿ ಮಾತನಾಡುವ ವೇಳೆ ಬಳಸಿರುವ ಪದಗಳು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ. ಚುನಾಯಿತ ಜನಪ್ರತಿನಿಧಿಯಾದ ನನಗೆ ಈ ರೀತಿಯ ಪದಗಳನ್ನು ಬಳಸಿ ಮಾತನಾಡಿರುವುದು ಇದೇ ಮೊದಲು ಎಂದುಕೊಂಡಿದ್ದೇನೆ. ನನಗೆ ಈ ರೀತಿಯಾದರೆ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಸಂಸತ್ ಅಧಿವೇಶನದ ವೇಳೆ ನನಗೆ ಆ ರೀತಿಯ ಮಾತುಗಳನ್ನು ಕೇಳಿದ ಮೇಲೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಒಬ್ ಚುನಾಯಿತ ಜನಪ್ರತಿನಿಧಿಗೆ ಸಂಸತ್ ಅಧಿವೇಶನದಲ್ಲಿ ಈ ರೀತಿಯಾಗಿರುವುದು ಇದೇ ಮೊದಲು ಎಂದು ಮಾತನಾಡುವ ವೇಳೆ ಭಾವುಕರಾಗಿದ್ದಾರೆ.