ಕುಣಿಗಲ್: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಮಿಕ್ಸಿ, ಕುಕ್ಕರ್, ಫ್ಯಾನ್, ನಾನ್ಸ್ಟಿಕ್ ತವಾದಂತಹ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿದೆ. ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಲೋಡ್ಗಟ್ಟಲೆ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿಟ್ಟು ಕೊಂಡಿದ್ದು, ದಿನಾಂಕ ನಿಗದಿಯಾಗುತ್ತಿದ್ದಂತೆ ವಿತರಣೆ ಕಾರ್ಯ ಆರಂಭಿಸಿದ್ದಾರೆ.
ಇದೀಗ ಚುನಾವಣೆಯ ಪ್ರಚಾರದ ವೇಳೆ ತಮಗೆ ಕುಕ್ಕರ್ ನೀಡದೆ ಇರುವುದನ್ನು ಪ್ರಶ್ನಿಸಿದ ವೃದ್ಧೆಯೊಬ್ಬರ ಮೇಲೆ ಕಾಂಗ್ರೆಸ್ ಮುಖಂಡ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಉಜ್ಜನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದವರನ್ನು ಗಂಗಮ್ಮ (75) ಎಂದು ಗುರುತಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಎಂಬಾತ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳುವಿಗೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಹಲ್ಲೆಯ ಸಂಬಂಧ ಹಲ್ಲೆಗೊಳಗಾದ ಗಂಗಮ್ಮ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: IPL ಆರಂಭಕ್ಕೂ ಮುನ್ನ ಕೆ.ಎಲ್. ರಾಹುಲ್ ಟೆಂಪಲ್ ರನ್; ಈ ಬಾರಿಯಾದ್ರು ಖುಲಾಯಿಸುತ್ತಾ ಲಕ್
ಘಟನೆಯ ಹಿನ್ನೆಲೆ
ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಎಂಬಾತ ಬೆಂಗಳೂರು ಗ್ರಾಮಾಂತರದ ಕೈ ಅಭ್ಯರ್ಥಿ ಡಿಕೆ ಸುರೇಶ್ ಅವರಿಗೆ ಮತ ನೀಡುವಂತೆ ಉಜ್ಜನಿ ಗ್ರಾಮದಲ್ಲಿ ಕುಕ್ಕರ್ ಹಂಚಿದ್ದನಂತೆ. ಆದರೆ ಕುಕ್ಕರ್ ಹಂಚಿಕೆ ದಿನ ಗಂಗಮ್ಮಜ್ಜಿ ಊರಿನಲ್ಲಿರಲಿಲ್ಲ. ಗ್ರಾಮಕ್ಕೆ ಹಿಂದಿರುಗಿದಾಗ ವಿಷಯ ಅಜ್ಜಿಗೆ ತಿಳಿದಿದೆ. ಹದಿನೈದು ದಿನದ ಬಳಿಕ ನಾರಾಯಣ್ ಬಳಿ ಹೋಗಿ ನನಗೆ ಯಾಕೆ ಕುಕ್ಕರ್ ಕೊಟ್ಟಿಲ್ಲ ಎಂದು ಗಂಗಮ್ಮ ಪ್ರಶ್ನೆ ಮಾಡಿದ್ದಾರೆ.
ಇದರಿಂದ ಕೋಪಕೊಂಡ ನಾರಾಯಣ್ ಬಳಿ ಹೋಗಿ ನನಗೆ ಯಾಕೆ ಕುಕ್ಕರ್ ಕೊಟ್ಟಿಲ್ಲ ಎಂದು ಗಂಗಮ್ಮ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ನಾರಾಯಣ್ ಗಂಗಮ್ಮ ಅಜ್ಜಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಯ ವೇಳೆ ಗಂಗಮ್ಮನ ಕೈ ಬಳೆ ಕಿವಿಯ ಓಲೆ ಮುರಿದು ಹೋಗಿದ್ದು, ಅಜ್ಜಿ ಗಾಯಗೊಂಡಿದ್ದಾರೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.