ನವದೆಹಲಿ: ವಲಸೆ ಕಾರ್ಮಿಕರಿಂದ ರೈಲು ಪ್ರಯಾಣದ ಶುಲ್ಕ ಪಡೆಯುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಲಸೆ ಕಾರ್ಮಿಕರ ರೈಲು ಪ್ರಯಾಣದ ಟಿಕೆಟ್ ದರ ಭರಿಸುವುದಾಗಿ ತಿಳಿಸಿದ್ದಾರೆ.
ಕಾರ್ಮಿಕರು ನಮ್ಮ ಆರ್ಥಿಕತೆಯ ಬೆನ್ನೆಲುಬು. ಲಾಕ್ಡೌನ್ ನಂತರ ಕೆಲಸ ಇಲ್ಲದೆ ಅವರ ಬಳಿ ಹಣ ಇಲ್ಲ. ಇಂತ ಸಂದರ್ಭದಲ್ಲಿ ಅವರನ್ನು ಸ್ವಂತ ಊರಿಗೆ ಮರಳಿಸಲು ಸರ್ಕಾರ ರೈಲು ದರ ಪಡೆಯುತ್ತಿರುವುದು ಜನ ವಿರೋಧಿ ನೀತಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ ಕೆಎಸ್ಆರ್ಟಿಸಿಗೆ 1 ಕೋಟಿ ರೂ. ದೇಣಿಗೆ ಕೊಟ್ಟ ಕೆಪಿಸಿಸಿ, ಕಾರ್ಮಿಕರ ಕಷ್ಟ ಆಲಿಸಿದ ಕಾಂಗ್ರೆಸ್
ಸ್ವಂತ ಊರುಗಳಿಗೆ ತೆರಳುತ್ತಿರುವ ಎಲ್ಲ ಕಾರ್ಮಿಕರ ರೈಲು ಪ್ರಯಾಣ ದರವನ್ನು ಕಾಂಗ್ರೆಸ್ ಭರಿಸಲಿದೆ. ಆಯಾ ರಾಜ್ಯಗಳ ಕಾಂಗ್ರೆಸ್ ಸಮಿತಿ ಹಣ ಪಾವತಿ ಮಾಡಲಿವೆ ಎಂದು ಅವರು ಘೋಷಿಸಿದರು.
ಕಾರ್ಮಿಕರ ಶ್ರಮ ಹಾಗೂ ತ್ಯಾಗ ನಮ್ಮ ರಾಷ್ಟ್ರದ ಅಡಿಪಾಯ. ಕಷ್ಟದ ಸ್ಥಿತಿಯಲ್ಲಿ ಅವರನ್ನು ಕೈಬಿಡುವುದು ಸರಿಯಲ್ಲ. ವಲಸೆ ಕಾರ್ಮಿಕರನ್ನು ಕೇಂದ್ರ ಸರ್ಕಾರ ಕೈಬಿಟ್ಟರೂ ಕಾಂಗ್ರೆಸ್ ಕೈಬಿಡುವುದಿಲ್ಲ. ಎಲ್ಲ ರಾಜ್ಯಗಳಿಗೂ ಹಣ ಪಾವತಿ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ ಎಣ್ಣೆಗಾಗಿ ನೆರೆ ರಾಜ್ಯದ ಗಡಿ ದಾಟಿ ಬಂದ ಮದ್ಯ ಪ್ರಿಯರು
ಸ್ವಾತಂತ್ರ್ಯ ನಂತರ ರಾಷ್ಟ್ರ ವಿಭಜನೆಯಾದ ವೇಳೆ ಸಾರ್ವಜನಿಕರು ನೂರಾರು ಕಿ.ಮೀ. ನಡೆದುಕೊಂಡು ಬಂದಿದ್ದರು. ಈಗ ಅದೇ ಸ್ಥತಿ ಮತ್ತೆ ಎದುರಾಗಿದೆ. ರೈಲ್ವೇ ಮಂಡಳಿ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಗೆ 151 ಕೋಟಿ ರೂಪಾಯಿ ದೇಣಿಗೆ ನೀಡುತ್ತದೆ. ಆದರೆ ಹಸಿವಿನಿಂದ ಕಂಗೆಟ್ಟಿರುವ ಕಾರ್ಮಿಕರ ಪ್ರಯಾಣಕ್ಕೆ ಶುಲ್ಕ ವಸೂಲಿ ಮಾಡುತ್ತಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಸರ್ಕಾರ ಉಚಿತವಾಗಿ ವಿಮಾನ ಪ್ರಯಾಣ ಏರ್ಪಡಿಸುವುದಾಗಿ ತಿಳಿಸಿದೆ. ಆದರೆ ನಮ್ಮ ರಾಷ್ಟ್ರದ ಬೆನ್ನುಲುಬಾಗಿರುವ ಕಾರ್ಮಿಕರ ನೆರವಿಗೆ ಬರಲು ಹಿಂಜರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ನೂರು ಕೋಟಿ ರೂಪಾಯಿ ವೆಚ್ಚ ಮಾಡಿದೆ. ಕಾರ್ಮಿಕರ ರಕ್ಷಣೆಗೆ ನಯಾ ಪೈಸೆ ಖರ್ಚು ಮಾಡಲು ಹಿಂಜರಿಯುತ್ತಿದೆ ಎಂದು ಅವರ ವಾಗ್ದಾಳಿ ನಡೆಸಿದರು. (ಏಜೆನ್ಸೀಸ್)
ಇದನ್ನೂ ಓದಿ ಮದ್ಯದ ಮತ್ತು ಅಳತೆ ಮೀರಿ ಕುಡಿದರೆ ಆಪತ್ತು: ಎಣ್ಣೆ ಸಿಕ್ಕ ಖುಷಿಗೆ ನಿಯಂತ್ರಣ ಮೀರದಿರಿ