More

    ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ಮತ್ತೊಂದು ಶಾಕ್; ಕಣದಿಂದ ಹಿಂದೆ ಸರಿದ ಪ್ರಭಾವಿ ನಾಯಕ

    ನವದೆಹಲಿ: ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮಂಗಳವಾರ 43 ಅಭ್ಯರ್ಥಿಗಳಿರುವ ಎರಡನೇ ಪಟ್ಟಿಯನ್ನು ರಿಲೀಸ್​ ಮಾಡಿದೆ. ಆದರೆ, ಎರಡನೇ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಕಾಂಗ್ರೆಸ್​ ಪಾಳಯದಲ್ಲಿ ಅಸಮಾಧಾನದ ಕಟ್ಟೆ ಹೊಡೆದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಭರತ್‌ಸಿನ್ಹಾ ಸೋಲಂಕಿ ಲೋಕಸಭೆ ಚುನಾವಣೆಯಿಂದ ದೂರು ಉಳಿಯುವುದಾಗಿ ಘೋಷಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭರತ್​ಸಿನ್ಹಾ ಸೋಲಂಕಿ, ನನಗೆ ಮತ್ತು ನನ್ನ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷವು ಸಾಕಷ್ಟು ನೀಡಿದೆ. ಪ್ರಸ್ತುತ ಜಮ್ಮು-ಕಾಶ್ಮೀರದ ಎಐಸಿಸಿ ಉಸ್ತುವಾರಿ ಹಾಗೂ ಗುಜರಾತ್‌ನಲ್ಲಿ ಪಕ್ಷದ ಪರವಾಗಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸಾಧ್ಯವಾಗುವಂತೆ, ಈ ಭಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಕೇಂದ್ರ ನಾಯಕತ್ವದ ಯಾವುದೇ ನಿರ್ಧಾರವನ್ನು ನಾನು ಸ್ವೀಕರಿಸುತ್ತೇನೆ ಮತ್ತು ಪಾಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೋರ್ವನ ಹುಚ್ಚಾಟ; ಪರದಾಡಿದ ಪ್ರಯಾಣಿಕರು

    2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್​ನ ಆನಂದ್​ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭರತ್​ಸಿನ್ಹಾ ಸೋಲಂಕಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸೋತಿದ್ದರು. ಕಳೆದ ಕೆಲ ದಿನಗಳ ಹಿಂದೆ ಗುಜರಾತ್​ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಜಗದೀಶ್​ ಠಾಕೋರ್​ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ ಬಳಿಕ ಮತ್ತೋರ್ವ ನಾಯಕ ಭರತ್​ಸಿನ್ಹಾ ಸೋಲಂಕಿ ತಮ್ಮ ನಿರ್ಧಾರ ಪ್ರಕಟಿಸಿರುವುದು ಕಾಂಗ್ರೆಸ್​ ಹೈಕಮಾಂಡ್​ಗೆ ನುಂಗಲಾರದ ತುತ್ತಾಗಿದೆ.

    ಕಳೆದ ಕೆಲ ದಿನಗಳಿಂದ ಗುಜರಾತ್​ನಲ್ಲಿ ಕಾಂಗ್ರೆಸ್​ನ ಹಾಲಿ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವ ನಡುವೆಯೇ ಈ ಬೆಳವಣಿಗೆ ಕೈ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರ ನಡುವೆಯೇ ಭರತ್​ಸಿನ್ಹಾ ಸೋಲಂಕಿ ಅವರ ನಡೆ ಕಾಂಗ್ರೆಸ್​ ಪಕ್ಷವನ್ನು ಚಿಂತೆಗೆ ದೂಡಿದ್ದು, ಇದನ್ನು ನಾಯಕರು ಹೇಗೆ ಸಂಭಾಲಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts