ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಕಿಡಿಗೇಡಿಗಳ ಹುಚ್ಚಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ BMRCL ಕರಿಣ ಕ್ರಮ ಜರುಗಿಸಿದರು ಯಾವುದೇ ಪ್ರಯೋಜನೆ ಬೀರುತ್ತಿಲ್ಲ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ವೈರಲ್ ಆಗುರವ ಭರದಲ್ಲಿ ರೈಲಿನ ಹಳಿ ಮೇಲೆ ಇಳಿಯುವುದು, ಸಹ ಪ್ರಯಾಣಿಕರಿಗೆ ತೊಂದರೆಯಾಗುವಂತೆ ರೀಲ್ಸ್ ಮಾಡುವುದು ಸೇರಿದಂತೆ ಒಂದಿಲ್ಲೊಂದು ಅವಾಂತರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.
ಮಂಗಳವಾರ (ಮಾರ್ಚ್ 12) ಕೂಡ ಇಂತಹ ಒಂದು ಘಟನೆ ನಡೆದಿದ್ದು, ಕೆಲಕಾಲ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ನಗರದ ಜ್ಞಾನಭಾರತಿ ಸ್ಟೇಷನ್ನಿಂದ ಪಟ್ಟಣಗೆರೆ ಸ್ಟೇಷನ್ ನಡುವೆ ಮೆಟ್ರೋ ಹಳಿಯಲ್ಲಿ ಯುವಕನೊಬ್ಬ ಇಳಿದು ಮನಬಂದಂತೆ ಓಡಾಡಿದ್ದಾನೆ. ಹಳಿ ಮೇಲೆ ಯುವಕನ ಓಡಾಟವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ
ಯುವಕ ಮೆಟ್ರೋ ಹಳಿ ಮೇಲೆ ಕಂಡು ಬರುತ್ತಿದ್ದಂತೆ ಬಿಎಂಆರ್ಸಿಎಲ್ ಅಧಿಕಾರಿಗಳು, ಕೂಡಲೇ ಪವರ್ ಆಫ್ ಮಾಡಿಸಿ ಸುಮಾರು 27 ನಿಮಿಷಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಬಿಎಂಆರ್ಸಿಎಲ್ ಅಧಿಕಾರಿಗಳು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕ ಹಳಿಯಿಂದ ಹೊರಬಂದ ಬಳಿಕ ಪರಿಶೀಲನೆ ನಡೆಸಿ, ನಂತರ ಎಂದಿನಂತೆ ಮೆಟ್ರೋ ಸೇವೆ ಆರಂಭಿಸಲಾಗಿದೆ.
ಮೆಟ್ರೋ ಹಳಿಗಳ ಮೇಲೆ ವ್ಯಕ್ತಿ ಕಾಣಿಸಿಕೊಂಡಿದ್ದು ಇದೇ ಮೊದಲೇನಲ್ಲ. ವರ್ಷದ ಆರಂಭದಲ್ಲಿ ಮಹಿಳೆಯೊಬ್ಬರು ಹಳಿಗೆ ಜಿಗಿದ ಘಟನೆ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿತ್ತು. ಮೆಟ್ರೋಗಾಗಿ ಕಾಯುತ್ತಿದ್ದ ಆಕೆ, ಹಳಿ ಮೇಲೆ ಬಿದ್ದ ತನ್ನ ಮೊಬೈಲ್ ತೆಗೆಯಲು ಹಳಿಗೆ ಜಿಗಿದಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಆಕೆಯನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಇನ್ನು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಕಾರಣ ಪರ್ಪಲ್ ಲೈನ್ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು.