ಹುಬ್ಬಳ್ಳಿ: ಕರ್ನಾಟಕದಲ್ಲಿ ಬಿಜೆಪಿಯ ಇಂದಿನ ಸ್ಥಿತಿ ಬಗ್ಗೆ ಚಿಂತಿಸಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋನರೆಡ್ಡಿ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೋನರೆಡ್ಡಿ ಮಾಜಿ ಸಿಎಂ ಆರೋಗ್ಯದ ವಿಚಾರವಾಗಿ ನೀಡಿರುವ ಹೇಳಿಕೆ ಹೊಸ ವಿವಾದ ಒಂದನ್ನು ಹುಟ್ಟು ಹಾಕಿದೆ.
ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಾಘಾತ ಆಯಿತು. ಜತೆಗೆ ಅವರ ಪಕ್ಷದಲ್ಲಿ ಅವರ ವರ್ಚಸ್ಸು ಕಡಿಮೆ ಆಗಿದೆ ಎಂದು ಅವರಿಗೆ ಹಾರ್ಟ್ ಅಟ್ಯಾಕ್ ಆಯ್ತು. ಬಿಜೆಪಿ ಪಕ್ಷ ಅಧೋಗತಿಗೆ ಹೋಗಿರುವುದನ್ನು ನೋಡಿ ಚಿಂತೆ ಮಾಡಿ ಮಾಡಿ ಬೊಮ್ಮಾಯಿ ಅವರಿಗೆ ಹಾರ್ಟ್ ಅಟ್ಯಾಕ್ ಆಯ್ತು. ಬಸವರಾಜ ಬೊಮ್ಮಾಯಿಗೆ ಹೃದಯಾಘಾತ ಆಗಿದ್ದು ಯಾಕೆ ಗೊತ್ತಾ ಎಂದು ಮಾತನಾಡುವ ವೇಳೆ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಾಲಬಾಧೆ ತಾಳಲಾರದೆ ಮಗನನ್ನೇ ಮಾರಾಟಕ್ಕಿಟ್ಟ ತಂದೆ
ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು 5 ತಿಂಗಳು ಆಯ್ತು. ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುಲು ಆಗಿಲ್ಲ ಎಂದು ಯೋಚನೆ ಮಾಡಿ ಮಾಡಿ ಹೃದಯಾಘಾತ ಆಗಿದೆ ಎಂದು ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋನರೆಡ್ಡಿ ವ್ಯಂಗ್ಯವಾಡಿದ್ದಾರೆ.
ಮಾಜಿ ಮುಖ್ಯಮಂತ್ರಿಯ ಅನಾರೋಗ್ಯದ ಕುರಿತು ಸೌಜನ್ಯವನ್ನೇ ಮರೆತು ಕಾಂಗ್ರೆಸ್ ಶಾಸಕ ಮಾತನಾಡಿದರೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. ಬಹಿರಂಗ ಸಭೆಯಲ್ಲೇ ಬೊಮ್ಮಾಯಿ ಅನಾರೋಗ್ಯದ ಕುರಿತು ಅಪಹಾಸ್ಯ ಮಾಡಿದ್ದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.