ಲಖನೌ: ಸಾಲಬಾಧೆ ತಾಳಲಾರದೆ ತಂದೆಯೇ ತನ್ನ ಮಗನನ್ನು ಮಾರಾಟಕ್ಕಿಡುವಂತೆ ಒತ್ತಾಯಿಸಿರುವ ಅಸಹಾಯಕ ಘಟನೆ ಉತ್ತರಪ್ರದೇಶದ ಆಲಿಗಢದಲ್ಲಿ ನಡೆದಿದೆ.
ಆಲಿಗಢದ ರೋಡ್ವೇಸ್ ಬಸ್ ನಿಲ್ದಾಣದಲ್ಲಿ ಕುಟುಂಬವೊಂದು ಕತ್ತಿಗೆ ಬೋರ್ಡ್ ನೇತು ಹಾಕಿಕೊಂಡು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಸರಿಯಾದ ಸಮಯಕ್ಕೆ ಹಣ ಕೊಡದ ಕಾರಣ ಇಬ್ಬರ ನಡುವೆ ಜಗಳ ನಡೆದಿತ್ತು. ಈ ನಡುವೆ ಹಣವನ್ನು ಹಿಂತಿರುಗಿಸುವಂತೆ ವ್ಯಕ್ತಿ ದುಂಬಾಲು ಬಿದ್ದ ಕಾರಣ ದಿಕ್ಕು ತೋಚದೆ ತಮ್ಮ ಮಗನನ್ನು 6-8 ಲಕ್ಷ ರೂಪಾಯಿಗೆ ಮಾರಾಟ ಮಾಡುವುದಾಗಿ ಬೋರ್ಡ್ ಹಾಕಿಕೊಂಡು ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದಾರೆ.
ಇದನ್ನೂ ಓದಿ: ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ; ಉದ್ಯಮಿಗೆ ಲಾಗಿನ್ ಐಡಿ ಕೊಟ್ಟಿದ್ದು ನಿಜವೆಂದ ಸಂಸದೆ ಮಹುವಾ ಮೊಯಿತ್ರಾ
ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ವ್ಯಕ್ತಿ ವಿವರಿಸಿದ್ದಾರೆ. ಕೂಡಲೇ ಸಾಲ ಕೊಟ್ಟ ವ್ಯಕ್ತಿಯನ್ನು ಠಾಣೆಗೆ ಕರೆಸಲಾಗಿದ್ದು, ಕಿರುಕುಳ ನೀಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಮಗನನ್ನು ತಂದೆ ಮಾರಾಟಕ್ಕಿಟ್ಟಿರುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಅಖಿಲೇಶ್ ಯಾದವ್, ಇದು ಬಿಜೆಪಿಯ ಅಮೃತಕಾಲ ಎಂದು ಕಿಡಿಕಾರಿದ್ದಾರೆ. ಈ ಚಿತ್ರ ಜಗತ್ತಿನಾದ್ಯಂತ ಹರಡಿ ಇಡೀ ವಿಶ್ವದಲ್ಲಿ ರಾಜ್ಯದ ಹಾಗೂ ದೇಶದ ಘನತೆಗೆ ಮಸಿ ಬಳಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.