ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಈಡಿಗ ಸಮುದಾಯದ ಸಮಾವೇಶವು ರಾಜಕೀಯ ವಾಗ್ಯುದ್ಧಕ್ಕೆ ವೇದಿಕೆಯಾಗಿದೆ. ಸಮಾವೇಶದಿಂದ ದೂರ ಉಳಿದಿರುವ ಸಮುದಾಯದ ಪ್ರಬಲ ನಾಯಕ, ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಯಾವ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದೆವೋ ಮೊದಲು ಅದನ್ನು ಈಡೇರಿಸಬೇಕಿದೆ ಎಂದು ಹೇಳುವ ಮೂಲಕ ಈಡಿಗ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ನನಗೆ ಅಷ್ಟೇನು ಪರಿಚಯವಿಲ್ಲ. ನಾನು ಯಾವತ್ತೂ ಮ್ಯಾಚ್ ಫಿಕ್ಸಿಂಗ್ ರಾಜಕಾರಣ ಮಾಡಲಿಲ್ಲ, ಏನಾದ್ರೂ ಫಿಕ್ಸಿಂಗ್ ರಾಜಕಾರಣ ಮಾಡಿದ್ದಿದ್ರೆ ಪರಿಚಯ ಇರುತ್ತಿತ್ತು. ಆದರೆ, ನಾನು ಅಂತಹ ರಾಜಕಾರಣ ಮಾಡಿಲ್ಲ ಮತ್ತು ವ್ಯಕ್ತಿಗತವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಎಲ್ಲಿಯೂ ಸಮರ್ಥನೆ ಮಾಡಿಕೊಂಡಿಲ್ಲ ಎಂದರು.
ಸಮಾವೇಶದ ಬಗ್ಗೆ ಮಾತನಾಡಿದ ಹರಿಪ್ರಸಾದ್, ಇದು ಮೊದಲೇ ಚರ್ಚೆ ಮಾಡಿ, ಯೋಜನೆ ರೂಪಿಸಿ ಮಾಡುತ್ತಿರುವ ಸಮಾವೇಶವಲ್ಲ, ಯಾರೋ ಒಬ್ಬರ ಪ್ರೇರಣೆಯಿಂದ ದಿಢೀರನೇ ನಿಗದಿಯಾಗಿರುವ ಸಮಾವೇಶದಲ್ಲಿ ನಾನು ಹೋಗಿ ಮಾಡಬೇಕಾಗಿರುವುದು ಏನೂ ಇಲ್ಲ. ಯಾವುದೇ ಒಂದು ಸಮಾವೇಶವನ್ನು ಮಾಡಬೇಕಾದರೆ, ಎಲ್ಲರ ಬಳಿ ಚರ್ಚೆ ಮಾಡಿ, ಏನೇನು ಬೇಡಿಕೆಗಳನ್ನು ಇಡಬೇಕೆಂದು ಪಟ್ಟಿ ಮಾಡಬೇಕು. ಆದರೆ, ಯಾರೊಂದಿಗೂ ಚರ್ಚೆ ನಡೆದಿಲ್ಲ. ಎಲ್ಲಿ ಚರ್ಚೆಯಾಗಿದೆ ಹೇಳಿ? ನಾಲ್ಕು ಜನರೊಂದಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತುಕೊಂಡು ನಿಗದಿ ಮಾಡಿದರೆ ಸಾಲದು ಎಂದರು.
ಇದೊಂದು ರಾಜಕೀಯ ಕುಂತಂತ್ರದ ಸಮಾವೇಶವಾಗಿದೆ. ಸಿದ್ದರಾಮಯ್ಯ ಅವರನ್ನು ನಾನೆಂದಿಗೂ ವೈಯಕ್ತಿಕವಾಗಿ ಸಮರ್ಥನೆ ಮಾಡಿಕೊಂಡಿಲ್ಲ. ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾಗ ಮಾತ್ರ ಅವರನ್ನು ಸಮರ್ಥಿಸಿಕೊಂಡಿದ್ದೇನೆ. ಅಷ್ಟಕ್ಕೂ ನನಗೆ ಅವರ ಪರಿಚಯವಿಲ್ಲ. ಏಕೆಂದರೆ, ನಾನು ಯಾರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿದವನಲ್ಲ. ಫಿಕ್ಸಿಂಗ್ ಮಾಡುವವರು ಎಲ್ಲರೊಂದಿಗೂ ಚೆನ್ನಾಗಿ ಇರುತ್ತಾರೆ. ನಾನು ಪಕ್ಷದಲ್ಲಿ ರಾಜಕೀಯ ಮಾಡಿ ಬೆಳೆದವನು ಎಂದು ಪರೋಕ್ಷವಾಗಿ ಮಧು ಬಂಗಾರವನ್ನು ಅವರಿಗೆ ಟಾಂಕ್ ಕೊಟ್ಟರು.
ಇದು ರಾಜಕೀಯ ಕುತಂತ್ರದ ಸಮಾವೇಶ ಎಂದು ಪುನರುಚ್ಛರಿಸಿದ ಹರಿಪ್ರಸಾದ್, ಇನ್ನೊಬ್ಬರ ಕುತಂತ್ರಕ್ಕಾಗಿ ಮತ್ತು ಸ್ವಹಿತಾಸಕ್ತಿಗಾಗಿ ನಿಮ್ಮ ಹಿತಾಸಕ್ತಿಯನ್ನು ಬಲಿ ಕೊಡುವವರಿಗೆ ನೀವೆಂದು ಬಲಿಯಾಗಬೇಡಿ ಎಂದು ಸಮುದಾಯದ ಜನತೆಗೆ ಹರಿಪ್ರಸಾದ್ ಕರೆ ನೀಡಿದ್ದಾರೆ.
50 ಶಾಸಕರೊಂದಿಗೆ ಕೇಂದ್ರದ ಕದ ತಟ್ಟಿದ ಕಾಂಗ್ರೆಸ್ ನಾಯಕ! ಹೊಸ ಬಾಂಬ್ ಸಿಡಿಸಿದ ಎಚ್ಡಿಕೆ
ಬಿಗ್ಬಾಸ್ ಶೋ ಬಗ್ಗೆ ಈ ಅಜ್ಜಿ ಹಾಡಿದ ಮಾತುಗಳನ್ನು ಕೇಳಿದ್ರೆ ನೀವು ಫಿದಾ ಆಗೋದು ಗ್ಯಾರೆಂಟಿ!