ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್ವಿಬಿ) ದಿವಾಳಿಯಾಗಿ ಮುಚ್ಚಿದ ಬೆನ್ನಲ್ಲೇ ಅಮೆರಿಕದ ಇನ್ನೊಂದು ಬ್ಯಾಂಕ್ ಇದೇ ಹಾದಿಯಲ್ಲಿದೆ. ನ್ಯೂಯಾರ್ಕ್ ನಗರದ ಸಿಗ್ನೇಚರ್ ಬ್ಯಾಂಕ್ಗೆ ಈಗ ಬೀಗ ಬಿದ್ದಿರುವುದು ಜಗತ್ತಿನಾದ್ಯಂತ ಬ್ಯಾಂಕಿಂಗ್ ವಲಯದಲ್ಲಿ ವ್ಯಾಪಕ ಪರಿಣಾಮ ಬೀರಬಹುದಾದ ಸಂಗತಿಯಾಗಿದೆ. ದಿವಾಳಿ ಸರಪಳಿ ಮುಂದುವರಿದು ಇನ್ನೆಷ್ಟು ಬ್ಯಾಂಕ್ಗಳಿಗೆ ಬೀಗ ಬೀಳಬಹುದೋ ಎಂಬ ಆತಂಕ ಬ್ಯಾಂಕಿಂಗ್ ವಲಯದಲ್ಲಿ ಮನೆಮಾಡಿದೆ. ಎಸ್ವಿಬಿಯು ಸ್ಟಾರ್ಟಪ್ಗಳಿಗೆ (ನವೋದ್ಯಮ) ಸಾಲ ನೀಡಲು ಹೆಸರುವಾಸಿಯಾಗಿದ್ದರೆ, ಸಿಗ್ನೇಚರ್ ಬ್ಯಾಂಕ್ ಬಹುತೇಕವಾಗಿ ಕ್ರಿಪ್ಟೊ ಕರೆನ್ಸಿ ವ್ಯವಹಾರದಲ್ಲಿ ತೊಡಗಿತ್ತು.
ಬಾಂಡ್ಗಳ ಮೌಲ್ಯ ಕುಸಿದು ನಷ್ಟವಾದ ಕಾರಣ ಎಸ್ವಿಬಿ ದಿವಾಳಿಯಾದರೆ, ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದ್ದರಿಂದ ಸಿಗ್ನೇಚರ್ ಬ್ಯಾಂಕ್ ಮುಚ್ಚುವಂತಾಗಿದೆ ಎಂದು ಹೇಳಲಾಗಿದೆ. ಎಸ್ವಿಬಿ ಠೇವಣಿದಾರರು ಹಾಗೂ ಹೂಡಿಕೆದಾರರು 42 ಬಿಲಿಯನ್ ಡಾಲರ್ನಷ್ಟು (282 ಲಕ್ಷ ಕೋಟಿ ರೂಪಾಯಿ) ಮೊತ್ತದ ಹಣ ಹಿಂಪಡೆದ ಪರಿಣಾಮವಾಗಿ ಬ್ಯಾಂಕ್ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿದೆ. ಈ ಕಾರಣದಿಂದಾಗಿ ಕಳೆದ ವಾರ ಎಸ್ವಿಬಿ ತನ್ನ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಕಳೆದ ಶುಕ್ರವಾರ ಕ್ಯಾಲಿಫೋರ್ನಿಯಾದ ಬ್ಯಾಂಕಿಂಗ್ ಅಧಿಕಾರಿಗಳು ಎಸ್ವಿಬಿಯನ್ನು ಅಧಿಕೃತವಾಗಿ ಮುಚ್ಚಿದ್ದಾರೆ. 2008ರಲ್ಲಿ ಉಂಟಾದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಬ್ಯಾಂಕಿಂಗ್ ವಲಯದಲ್ಲಿನ ಅತಿದೊಡ್ಡ ವೈಫಲ್ಯ ಎಂದೇ ಈಗ ಇದನ್ನು ಪರಿಗಣಿಸಲಾಗಿದೆ. ಎಸ್ವಿಬಿ ಠೇವಣಿದಾರರ ಹಣ ಮರಳಿಸಲಾಗುವುದು; ಠೇವಣಿದಾರರ ಅಗತ್ಯಗಳನ್ನು ಪೂರೈಸಲು ಬ್ಯಾಂಕ್ಗಳಿಗೆ ಹೆಚ್ಚುವರಿ ನೆರವನ್ನು ಒದಗಿಸಲಾಗುವುದೆಂದು ಅಮೆರಿಕದ ಫೆಡರಲ್ ರಿಸರ್ವ್ ಪ್ರಕಟಿರುವುದು ಹಾಗೂ ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಬ್ರಿಟನ್ ಘಟಕವನ್ನು ಎಚ್ಡಿಎಫ್ಸಿ ಬ್ಯಾಂಕ್ ಖರೀದಿಸಿರುವುದು ಒಂದಿಷ್ಟು ಸಮಾಧಾನಕರ ಸಂಗತಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದುಹೋಗುತ್ತಿದ್ದಂತೆ ರಾಜ್ಯಕ್ಕೆ ಕೋಟಿಗಟ್ಟಲೆ ಹಣ ಮಂಜೂರು!
ಎರಡು ವರ್ಷಗಳ ಕಾಲ ಕಾಡಿದ ಕೋವಿಡ್ ಸಾಂಕ್ರಾಮಿಕದಿಂದ ತಲೆದೋರಿದ ಆರ್ಥಿಕ ಹಿಂಜರಿತವು ಜಾಗತಿಕವಾಗಿ ಬ್ಯಾಂಕಿಂಗ್ ವಲಯಕ್ಕೂ ತಟ್ಟಿತ್ತು. ಇದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕಳೆದ ವರ್ಷ ಶುರುವಾಗಿರುವ ರಷ್ಯಾ- ಯೂಕ್ರೇನ್ ಯುದ್ಧದಿಂದ ಈಗ ಮತ್ತೆ ಆರ್ಥಿಕ ಹಿನ್ನಡೆ ಉಂಟಾಗಿದೆ. ಬೆಲೆಯೇರಿಕೆ ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರ ಹೆಚ್ಚಳ ಮಾಡಿರುವುದು ಎಸ್ವಿಬಿಯ ಪತನದ ಪ್ರಮುಖ ಕಾರಣಗಳಲ್ಲೊಂದು ಎನ್ನಲಾಗಿದೆ. ನವೋದ್ಯಮಗಳಿಗೆ ಸಾಲ ಒದಗಿಸಿ, ಅವುಗಳ ಯಶಸ್ಸಿಗೆ ಸಾಕಷ್ಟು ಕೊಡುಗೆ ನೀಡಿದ ಎಸ್ವಿಬಿಯಲ್ಲೇ ನವೋದ್ಯಮಗಳು ಕೂಡ ಲಾಭದ ಹಣವನ್ನು ಠೇವಣಿ ಇಟ್ಟಿದ್ದವು. ವಿವಿಧ ದೇಶಗಳ ಹೂಡಿಕೆದಾರರು, ಕಂಪನಿಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದು, ಇದರ ಪರಿಣಾಮ ಮತ್ತು ತೀವ್ರತೆ ಎಷ್ಟೆಂಬುದನ್ನು ಮೌಲ್ಯಮಾಪನ ಮಾಡಬೇಕಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನಿರೀಕ್ಷಿತ ಪತನ ಭಾರತದ ನವೋದ್ಯಮಗಳ ಮೇಲೆಯೂ ಪರಿಣಾಮ ಬೀರುತ್ತದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಎಸ್ವಿಬಿಯಲ್ಲಿ ಭಾರತೀಯ ಮೂಲದ ನವೋದ್ಯಮಗಳು ಹೂಡಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕುರಿತು ಸರ್ಕಾರ ಸಭೆ ಕರೆದು ಚರ್ಚೆಗೆ ಮುಂದಾಗಿದೆ. ಭಾರತೀಯ ನವೋದ್ಯಮಗಳು ಇಲ್ಲಿ ಹೂಡಿಕೆ ಮಾಡಿದ್ದರೆ, ಅದನ್ನು ವಾಪಸು ಪಡೆಯಲು ಸರ್ಕಾರ ನೆರವಿಗೆ ಧಾವಿಸಬೇಕಿದೆ. ಅಲ್ಲದೆ, ಭಾರತದ ಬ್ಯಾಂಕಿಂಗ್ ವಲಯಕ್ಕೂ ಇಲ್ಲಿ ಪಾಠವಿದೆ.
ರೈಲ್ವೇ ಸ್ಟೇಷನ್ನಲ್ಲಿ ಡ್ರಮ್ನೊಳಗೆ ಮಹಿಳೆಯ ಶವ ಪತ್ತೆ; ಪೊಲೀಸ್ ಅಧಿಕಾರಿಗಳ ದೌಡು, ವ್ಯಾಪಕ ಪರಿಶೀಲನೆ