ಬೆಂಗಳೂರು: ರಾಜ್ಯದಲ್ಲೂ ಚಳಿಯ ಅಬ್ಬರ ಜೋರಾಗಿದ್ದು ಉತ್ತರ ಕರ್ನಾಟಕ ಶೀತ ಗಾಳಿಗೆ ತತ್ತರವಾಗಿದೆ. ಈ ಬಾರಿ ದಾಖಲೆ ಪ್ರಮಾಣಕ್ಕೆ ಕನಿಷ್ಠ ಉಷ್ಣಾಂಶ ಇಳಿದಿದ್ದು ಮುಂದಿನ ಎರಡು ದಿನ ಶೀತ ಗಾಳಿಯ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಶೀತ ಗಾಳಿ ಅಬ್ಬರ ಹಿನ್ನೆಲೆ ಯಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ನಿನ್ನೆ ಬಾಗಲಕೋಟೆಯಲ್ಲಿ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಇದು ರಾಜ್ಯದಲ್ಲಿಯೇ ಅತೀ ಕನಿಷ್ಠ ತಾಪಮಾನವಾಗಿದೆ. ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಶೀತ ಮಾರುತಗಳು ಬೀಸುವ ಸಾಧ್ಯತೆ ಬಹಳಷ್ಟು ಇದೆ.
ಮುಂದಿನ 24 ಗಂಟೆಗಳ ಅವಧಿಯಲ್ಲಿ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಸೆಲ್ಷಿಯಸ್ ಕಡಿಮೆ ಸಾಧ್ಯತೆಇದೆ ಎಂದು ಹೇಳಲಾಗುತ್ತಿದೆ. ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ.
ಬೆಂಗಳೂರಲ್ಲೂ 13 ಡಿಗ್ರಿ ಸೆಲ್ಸಿಯಸ್ಗೆ ಕಡಿಮೆ ಉಷ್ಣಾಂಶ ಕುಸಿದಿದ್ದು ನಗರದಲ್ಲಿ ಮುಂದಿನ 24 ಗಂಟೆಗಳ ಕಾಲ ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟಮಂಜು ಮುಸುಕುವ ಸಾಧ್ಯತೆಗಳು ಬಹಳಷ್ಟು ಇರುತ್ತದೆ… ಅದಲ್ಲದೇ ರಾಜ್ಯಾದ್ಯಂತ ಮುಂದಿನ 48 ಗಂಟೆಗಳ ಕಾಲ ಚಳಿಯ ಅಬ್ಬರ ಹೆಚ್ಚಾಗುವ ಸಾಧ್ಯತೆ ತೋರುತ್ತಿದೆ.