ಮೈಸೂರು: ಇಂದಿನಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವರಿಗೂ ಆತ್ಮೀಯ ಆಮಂತ್ರಣವನ್ನು ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ. ಮೈಸೂರು ದಸರಾ ಎಂದರೆ ಬರಿ ಉತ್ಸವವಲ್ಲ. ಇದು ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಗತ ವೈಭವವನ್ನು ಪ್ರತಿಬಿಂಬಿಸುವ ನಾಡಹಬ್ಬ ಎಂದಿದ್ದಾರೆ.
ತಾಯಿ ಚಾಮುಂಡೇಶ್ವರಿ ಪೂಜೆಯೊಂದಿಗೆ ಆರಂಭವಾಗುವ ದಸರಾ ಆಚರಣೆಯು ಜಂಬೂಸವಾರಿಯ ವೈಭವದ ಮೆರವಣಿಗೆ, ಪಂಜಿನ ಕವಾಯತಿನ ರೋಮಾಂಚನ ಸಾಹಸಗಳೊಂದಿಗೆ ಸಂಪನ್ನಗೊಳ್ಳುತ್ತದೆ. ಈ ನಡುವೆ ಮೈಸೂರು ಅರಮನೆಯ ಭವ್ಯ ದೀಪಾಲಂಕಾರ, ಕರಕುಶಲ ವಸ್ತುಗಳ ಪ್ರದರ್ಶನ, ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಧಾರ್ಮಿಕ ಆಚರಣೆಗಳ ಕಣ್ಮನ ಸೆಳೆಯುವ ಹೂರಣವಿರಲಿದೆ.
ಇದನ್ನೂ ಓದಿ: ಆಪರೇಷನ್ ಅಜಯ್: ಯುದ್ಧ ಪೀಡಿತ ಇಸ್ರೇಲ್ನಿಂದ 3ನೇ ವಿಮಾನದಲ್ಲಿ ತಾಯ್ನಾಡಿಗೆ ಮರಳಿದ 197 ಭಾರತೀಯರು
ಪಾರಂಪರಿಕ ಆಚರಣೆ, ಸಮಕಾಲಿನ ಆಶಯಗಳ ಹದವರಿತ ಮಿಶ್ರಣವಾದ ಈ ಉತ್ಸವ ನಿಜ ಅರ್ಥದಲ್ಲಿ ಜನೋತ್ಸವವಾಗಿದೆ. ಕರ್ನಾಟಕದ ಹೆಮ್ಮೆಯ ದ್ಯೋತಕವಾದ ದಸರಾ ಉತ್ಸವಕ್ಕೆ ತಾವೆಲ್ಲರೂ ಆಗಮಿಸಿ ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ವಿನಂತಿಸುತ್ತೇನೆ. ಸರ್ವರಿಗೂ ಹೃತ್ಪೂರ್ವಕ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ಅವರು ಶುಭಕೋರಿದ್ದಾರೆ.
ನಾಡಿನ ಹೆಮ್ಮೆಯ ಮೈಸೂರು ದಸರಾಗೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.
ನಾಳೆಯಿಂದ 10 ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು, ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ನಾಡಬಂಧುಗಳಲ್ಲಿ ವಿನಂತಿಸುತ್ತೇನೆ.
– ಮುಖ್ಯಮಂತ್ರಿ @siddaramaiah #ಮೈಸೂರುದಸರಾ2023 pic.twitter.com/KiYGP2k7n5— CM of Karnataka (@CMofKarnataka) October 14, 2023
ದಸರಾಗೆ ಸಕಲ ಸಿದ್ಧತೆ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಅ.24ರವರೆಗೂ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕೈಗೊಳ್ಳಲಾಗಿದೆ. ದಸರಾ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮೈಸೂರು ನಗರ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಓರ್ವ ಡಿಐಜಿ, 11 ಎಸ್ಪಿ, 410 ಪೊಲೀಸ್ ಅಧಿಕಾರಿಗಳು, 3778 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 4200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಶಸ್ತ್ರ ಪಡೆಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಗರುಡ ಪಡೆ ಸಹ ನಿಯೋಜಿಸಲಾಗಿದೆ.
ಊಟದ ನಂತರ ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ… ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರಕ
BIGGBOSS KANNADA SEASON 10: ತುಕಾಲಿ ಸಂತೋಷ್ ಹುಟ್ಟಿದ್ದೇ ಪವಾಡವಂತೆ; ಶಾಕ್ ಆದ ಸ್ಪರ್ಧಿಗಳು!