More

    ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಕುರಿ, ಎಮ್ಮೆ ಕಾಯುತ್ತಾ ಇರಬೇಕಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಜನರಿಗೆ ಬಸವಣ್ಣ, ಹಡಪದ ಅಪ್ಪಣ್ಣ ಅವರಂಥವರ ಆದರ್ಶ ಮತ್ತು ವಿಚಾರಗಳು ಗೊತ್ತಾಗಬೇಕು ಎಂದಿದ್ದಾರೆ.

    ಹೃದಯ ಇದ್ದರೆ ಸಾಕು

    ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಚಲನೆ ಇಲ್ಲದೆ ಹಿಂದುಳಿದ ಶೋಷಿತ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ ಚಲನೆ ಸಿಗುವುದಿಲ್ಲ. ಹೀಗಾಗಿ ಬುದ್ದ, ಬಸವಾದಿ ಶರಣರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ಮುಕ್ತ ಸಮಾಜ ಇರಬೇಕು ಎಂದು ಆಶಿಸಿದ್ದರು. ಜನರಿಗೆ ಬಸವಣ್ಣ, ಹಡಪದ ಅಪ್ಪಣ್ಣ ಅವರಂಥವರ ಆದರ್ಶ ಮತ್ತು ವಿಚಾರಗಳು ಗೊತ್ತಾಗಬೇಕು. ಅದಕ್ಕಾಗಿ ಸಂತರ, ಬಸವಾದಿ ಶರಣರ ಜನ್ಮ ದಿನಾಚರಣೆಗಳನ್ನು ಆಚರಿಸಬೇಕು.

    ನಾವು ಬಸವಾದಿ ಶರಣರ ಆಶಯ ಮತ್ತು ಆದರ್ಶಗಳನ್ನು ಮುಂದುವರೆಸುವ ಉದ್ದೇಶದಿಂದಲೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತ ಆಗದೆ ಸರ್ವರಿಗೂ ಅನ್ವಯ ಆಗುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದು ವೆರಿ ಸಿಂಪಲ್. ನಮ್ಮ ಯೋಜನೆಗಳ ಹಿಂದಿನ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲು ಹೃದಯ ಇದ್ದರೆ ಸಾಕು.

    CM Siddaramaiah

    ಇದನ್ನೂ ಓದಿ: ಮನವಿ ಈಡೇರಿಸದಿದ್ದಕ್ಕೆ ಕಚೇರಿಯೊಳಗೆ ಉಡ ತಂದು ಬಿಟ್ಟ

    ಚತುವರ್ಣ ವ್ಯವಸ್ಥೆಯ ಜಾತಿ ಕಾರಣಕ್ಕೆ ಶೂದ್ರರು ಮತ್ತು‌ ಮಹಿಳೆಯರು ಕೇವಲ ಉತ್ಪಾದನೆಗೆ ಮಾತ್ರ ಸೀಮಿತವಾಗಿದ್ದರು. ಇವರಿಗೆ ತಮ್ಮ ಉತ್ಪಾದನೆಯನ್ನು ಅನುಭವಿಸುವ ಹಕ್ಕು ಇರಲಿಲ್ಲ. ಯಾರು ಉತ್ಪಾದನೆಯಲ್ಲಿ ತೊಡಗುವುದಿಲ್ಲವೋ ಅವರು ಮಾತ್ರ ಉಳಿದೆಲ್ಲರ ಉತ್ಪಾದನೆಯನ್ನು ಅನುಭವಿಸಬಹುದಿತ್ತು. ಆದ್ದರಿಂದ ಬಸವಾದಿ ಶರಣರು ಈ ಶೋಷಣೆಯುಕ್ತ ಸಮಾಜವನ್ನು ಅಳಿಸಿ ಜಾತಿ ಮುಕ್ತ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು.

    ಕಾಗೆ ಸ್ಮರಿಸಿದ ಸಿಎಂ

    ಬಸವಾದಿ ಶರಣರು ಮೌಡ್ಯ ಪರಂಪರೆ ವಿರುದ್ಧ ಹೋರಾಡಿದ್ದನ್ನು ವಿವರಿಸುವ ಸಂದರ್ಭದಲ್ಲಿ ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗವನ್ನು ಸಿಎಂ ಸ್ಮರಿಸಿದರು. ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಟಿವಿಗಳಲ್ಲಿ ಭಯಂಕರ ಚರ್ಚೆ ನಡೆಯಿತು. ಒಬ್ಬರು, ನಾನು ಬಜೆಟ್ ಮಂಡಿಸಲ್ಲ ಕುರ್ಚಿ ಕಳ್ಕೊತೀನಿ ಎಂದರು. ಇನ್ನೊಬ್ಬರು ಬಜೆಟ್ ಮಂಡಿಸಿದ ಮೇಲೆ ಅಧಿಕಾರ ಕಳ್ಕೊತಾರೆ ಎಂದರು. ಆದರೆ, ಕಾಗೆ ಹಾರಿಹೋಯ್ತು.

    ಮೌಡ್ಯದ ಕಾಗೆ ಹಾರಿಸಿದವರೂ ನಾಪತ್ತೆ ಆದ್ರು. ನಾನು ಕಾಗೆ ಕುಳಿತ ಬಳಿಕವೂ ಎರಡು ಬಜೆಟ್ ಮಂಡಿಸಿ ಅಧಿಕಾರ ಪೂರ್ತಿಯಾಗಿ, ಸಮರ್ಥವಾಗಿ ನಿರ್ವಹಿಸಿದೆ. ಆದ್ದರಿಂದ ಮೌಡ್ಯವನ್ನು ನಂಬಬೇಡಿ ಎಂದು ತಮ್ಮ ಅನುಭವದ ಮೂಲಕವೇ ವಿವರಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳ ಸೇರಿ ಹಲವರು ಉಪಸ್ಥಿತರಿದ್ದರು.

    Appanna Jayanti

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts