ಹಾವೇರಿ: ‘ನಮ್ಮೂರ ಅಳಿಯ ಮುಖ್ಯಮಂತ್ರಿ ಆಗಿದ್ದಾರೆ, ಅವರು ಇಂದೋ ನಾಳೆಯೋ ಮಾವನ ಮನೆಗೆ ಬರಬಹುದು’ ಎಂದು ಕಾಯುತ್ತಿದ್ದ ಈ ಊರ ಜನರಿಗೆ ಕೊನೆಗೂ ಅಂಥದ್ದೊಂದು ದಿನ ಬಂದುಬಿಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಹೆಂಡತಿಯ ತವರು ಮನೆಗೂ ಹೋಗಿ ಮತ ಯಾಚಿಸಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರ ಪರ ಮತ ಯಾಚನೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಕ್ಕಿಆಲೂರ ಪಟ್ಟಣದ ಹಳ್ಳೂರ ಓಣಿಯಲ್ಲಿರುವ ಅತ್ತೆಯ ಮನೆಗೂ ಭೇಟಿ ನೀಡಿದರು.
ಇದನ್ನೂ ಓದಿ: ನಾನು ಕೂಡ ಬಂಕಾಪೂರದಲ್ಲಿ ಬಾಳು ಮಾಮಾನ ಕುರಿ ಕಾದಿದ್ದೇನೆ: ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಯಾದ ಬಳಿಕ ಮಾವನ ಮನೆಗೆ ಇದೇ ಮೊದಲ ಭೇಟಿಯಾದ್ದರಿಂದ ಅವರಿಗೆ ಆರತಿ ಮಾಡಿ, ಹೂಗುಚ್ಛ ನೀಡಿ ಸಂಭ್ರಮದಿಂದ ಸ್ವಾಗತ ಕೋರಲಾಯಿತು. ಬಳಿಕ ಮನೆಯೊಳಗೆ ತೆರಳಿದ ಸಿಎಂ ಚಹಾ, ಮಂಡಕ್ಕಿ, ಮಿರ್ಚಿ ಸೇವಿಸಿದರು. ಅಲ್ಲದೆ ತಮ್ಮ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ್ ಅವರಿಗೆ ಮತ ನೀಡುವಂತೆ ಕೋರಿದರು.