ಅಹ್ಮದಾಬಾದ್: ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಭಾರತದಿಂದ ಕಳೆದವರ್ಷವೇ ಪರಾರಿಯಾಗಿದ್ದಾನೆ. ವರದಿಗಳ ಪ್ರಕಾರ ಆತ ಕೆರಿಬಿಯನ್ ಸಮುದ್ರದ ಬಳಿ ‘ಕೈಲಾಸ’ವನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾದವನಾದ ನಿತ್ಯಾನಂದನ ಬಂಧನಕ್ಕೆ ಅಹ್ಮದಾಬಾದ್ ಪೊಲೀಸರೂ ಪ್ರಯತ್ನ ಮಾಡುತ್ತಿದ್ದಾರೆ.
ಹಾಗೇ ಈ ವರ್ಷದ ಜನವರಿಯಲ್ಲಿ ನಿತ್ಯಾನಂದನ ಗುಜರಾತ್ನಲ್ಲಿರುವ ಆಶ್ರಮದಿಂದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದರು. ಅವರಿಬ್ಬರೂ ಆಶ್ರಮದಿಂದ ಹೋಗಿದ್ದೆಲ್ಲಿಗೆ ಎಂಬುದೇ ಗೊತ್ತಾಗಿರಲಿಲ್ಲ. ಆದರೆ ಇದೀಗ ಮೂಲಗಳ ಪ್ರಕಾರ ಯುವತಿಯರಿಬ್ಬರೂ ನಿತ್ಯಾನಂದನ ಕೈಲಾಸ ಸೇರಿಕೊಂಡು, ಅಲ್ಲಿ ಚಟ್ನಿ ಸಂಗೀತ (Chutney Music)ವನ್ನು ಅಭ್ಯಾಸ ಮಾಡುತ್ತಿದ್ದಾರಂತೆ.
Chutney Music ಎಂಬುದು ಇಂಡೋ-ಕೆರಿಬಿಯನ್ ಪ್ರಕಾರದ ಒಂದು ಸಂಗೀತ. ದಕ್ಷಿಣ ಕೆರೆಬಿಯನ್ನಲ್ಲಿ ಚಾಲ್ತಿಯಲ್ಲಿದ್ದು, ಟ್ರೆನಿಡಾಡ್, ಗಯಾನಾ ಸೇರಿ ಹಲವು ಕಡೆ ಜನಪ್ರಿಯ ಸಂಗೀತವಾಗಿದೆ. ಭೋಜಪುರಿ ಮತ್ತು ಕೆರಿಬಿಯನ್ ಶೈಲಿಯ ರಾಗಗಳ ಸಂಯೋಜನೆಯಿಂದ ಹೊರಹೊಮ್ಮಿದ ಚಟ್ನಿ ಸಂಗೀತ ಮೊದಲು ಬೆಳಕಿಗೆ ಬಂದಿದ್ದು 20ನೇ ಶತಮಾನದಲ್ಲಿ. ಇದನ್ನೂ ಓದಿ: ದೇಶದೊಳಗಿನ ಉಗ್ರರು ಇವರು..ಅಪ್ಪ-ಅಮ್ಮನ ಎದುರೇ ಪೊಲೀಸ್ ಪೇದೆಯನ್ನು ಬರ್ಬರವಾಗಿ ಕೊಂದರು…
ಇದೀಗ ನಿತ್ಯಾನಂದನ ಗುಜರಾತ್ನ ಆಶ್ರಮದಿಂದ ಪರಾರಿಯಾದ ಯುವತಿಯರು ಆತನ ಕೆರಿಬಿಯನ್ ಕೈಲಾಸ ಸೇರಿಕೊಂಡು ಇದೇ ಚಟ್ನಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆಂದು ಅಹ್ಮದ್ಬಾದ್ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಮಾಧ್ಯಮವೊಂದು ವರದಿ ಮಾಡಿದೆ.
ಯುವತಿಯರಿಬ್ಬರೂ ಅಕ್ಕ-ತಂಗಿ. 2015ರಿಂದ ಅಹ್ಮದಾಬಾದ್ನಲ್ಲಿರುವ ನಿತ್ಯಾನಂದನ ಆಶ್ರಮದಲ್ಲಿ ವಾಸವಾಗಿದ್ದರು. ಅವನೊಟ್ಟಿಗೆ ಅನೇಕ ದೇಶಗಳಿಗೂ ಹೋಗಿ ಬಂದಿದ್ದರು. ಕೆರಿಬಿಯನ್ಲ್ಲಿರುವ ಕೈಲಾಸ ಎಂಬಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮದಲ್ಲಿ ಈ ಇಬ್ಬರೂ ಯುವತಿಯರು ನೃತ್ಯ ಪ್ರದರ್ಶನ ಮಾಡುತ್ತಿದ್ದುದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರೇ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನೆಗಡಿ, ಕೆಮ್ಮಿನಷ್ಟೇ ಕಾಮನ್ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್ಫರ್ಡ್ ವಿವಿ ತಜ್ಞರ ಅಭಿಮತ
ನಿತ್ಯಾನಂದನ ಬಂಧನಕ್ಕೆ ಇಂಟರ್ಪೋಲ್ ಇನ್ನೂ ರೆಡ್ ಕಾರ್ನರ್ ನೋಟಿಸ್ ಕೊಟ್ಟಿಲ್ಲ. ಇದೀಗ ಆ ಇಬ್ಬರು ಹುಡುಗಿಯರನ್ನೂ ಕರೆತರಲು ಕೆಲವು ನಿಯಮಗಳು ಅಡ್ಡಿಯಾಗುತ್ತವೆ ಎಂದಿದ್ದಾರೆ.
ನಿತ್ಯಾನಂದನ ಆಶ್ರಮದಲ್ಲಿದ್ದ ತನ್ನ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ದೂರು ದಾಖಲಿಸಿದ್ದರು. (ಎಜೆನ್ಸೀಸ್)