ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸಂಸತ್ತಿನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಮಾತನಾಡಿದರು.
ಈಗಿನವರೆಗೂ ಭಾರತ ಮತ್ತು ಚೀನಾದ ನಡುವಿನ ಗಡಿ ಸಂಘರ್ಷ ಹಾಗೇ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗಲಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ವಿವರಿಸಿದರು.
ಗಡಿಯಲ್ಲಿನ ಸಾಂಪ್ರದಾಯಿಕ ಜೋಡಣೆಗಳನ್ನು ಚೀನಾ ಮಾನ್ಯ ಮಾಡುತ್ತಿಲ್ಲ. ಅಲ್ಲಿನ ನಿಯಮಗಳನ್ನು ಗೌರವಿಸುತ್ತಿಲ್ಲ ಎಂದೂ ಹೇಳಿದರು.
ಹಾಗೇ ಪೂರ್ವ ಲಡಾಖ್ನಲ್ಲಿ ಚೀನಾದ ಅತಿಕ್ರಮಣ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಆದರೆ ಚೀನಾ ಸೈನಿಕರು ಹಿಂಸಾತ್ಮಕ ನಡೆಯ ಮೂಲಕ ಈ ಹಿಂದಿನ ಎಲ್ಲ ಒಪ್ಪಂದಗಳನ್ನೂ ಉಲ್ಲಂಘಿಸಿದ್ದಾರೆ. ನಮ್ಮ ಭೂಪ್ರದೇಶಗಳ ರಕ್ಷಣೆ ಮಾಡಲು ಭಾರತೀಯ ಸೈನಿಕರು ಸಮರ್ಥವಾಗಿ ನಿಯೋಜಿಸಲ್ಪಟ್ಟಿದ್ದಾರೆ ಎಂದು ತಿಳಿಸಿದರು. ಅದ್ಯಾವುದೇ ಸಂದರ್ಭ ಬಂದರೂ ಅದನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ ಎಂಬ ಭರವಸೆಯನ್ನು ನಾನು ಈ ಕ್ಷಣದಲ್ಲಿ ನೀಡಬಲ್ಲೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಗಡಿಗಳನ್ನು ಕಾಯುತ್ತಿರುವ ಸಶಸ್ತ್ರಪಡೆಯೊಂದಿಗೆ ನಾವೆಲ್ಲರೂ ನಿಲ್ಲಬೇಕು ಎಂಬ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಸದನವನ್ನು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಭಾರತ-ಚೀನಾ ಗಡಿ ಸಂಘರ್ಷ ಶುರುವಾದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹೇಳಿಕೆ ನೀಡುತ್ತಿದ್ದಾರೆ. (ಏಜೆನ್ಸೀಸ್)
ಅಭಿಮಾನಿಗಳ ಹಾರೈಕೆಗೆ ಸಿಕ್ಕಿತು ಫಲ: ಎಸ್ಪಿಬಿ ಚೇತರಿಕೆ- ಮಗನಿಂದ ಮಾಹಿತಿ