ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾಹಿತಿ — ವಾರ್ ರೂಮ್ಗೆ ಬರಲಿದೆ ಕ್ಷಣಕ್ಷಣದ ಸಂದೇಶ
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರತಿಯೊಂದು ಮತದಾನ ಕೇಂದ್ರದ ಪ್ರತಿಕ್ಷಣದ ಮಾಹಿತಿ ಪಡೆಯಲಾಗುತ್ತಿದ್ದು, ಗುರುವಾರ ಸಂಜೆ 7 ಗಂಟೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಯಂತ್ರ ಹಾಗೂ ಪರಿಕರಗಳೊಂದಿಗೆ ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದ್ದಾರೆ.
ಉಡುಪಿಯ ಡಿಸಿ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಚುನಾವಣಾ ಕುರಿತ ಮಾಹಿತಿ ಸಂಗ್ರಹಣೆಗೆ ಗುರುವಾರ ಸ್ಥಾಪಿಸಿರುವ ವಾರ್ ರೂಮ್ನಲ್ಲಿ ಮಾತನಾಡಿ, 1842 ಮತದಾನ ಕೇಂದ್ರದಲ್ಲಿ ಈಗಾಗಲೇ ಎಲ್ಲರು ಮೊಕ್ಕಾಂ ಹೂಡಿದ್ದು, ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ ಎಂದರು.
2 ಗಂಟೆಗೊಮ್ಮೆ ಮಾಹಿತಿ
ಮತದಾನ ಕೇಂದ್ರಗಳಲ್ಲಿ ಮತಯಂತ್ರಗಳ ನ್ಯೂನತೆ, ಮತದಾನ ಕೇಂದ್ರಗಳ ಬಳಿ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟಾದಲ್ಲಿ ಕ್ಷಣದಲ್ಲಿಯೇ ವಾರ್ ರೂಮ್ಗೆ ಮಾಹಿತಿ ಲಭ್ಯವಾಗುತ್ತದೆ. ಹೀಗಾಗಿ ಅಗತ್ಯ ನೆರವು ನೀಡಲು ಕ್ರಮ ವಹಿಸಿ, ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುವು ಮಾಡಕೊಡಲಾಗುವುದು. ಎಲ್ಲ ಮತದಾನ ಕೇಂದ್ರದಿಂದ ಪ್ರತಿ ಎರಡು ಗಂಟೆಗೊಮ್ಮೆ ಆಗಿರುವ ಶೇಕಡವಾರು ಮತದಾನದ ಮಾಹಿತಿ ಪಡೆಯಲಾಗುವುದು. ಆ ವಿವರವನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಲು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದರು.
ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾಧಿಕಾರಿ ಕಚೇರಿಯ ವಾರ್ ರೂಮ್ ಸಿಬ್ಬಂದಿ ಇದ್ದರು.
ಜಿಲ್ಲಾ ಮಟ್ಟದ ತಂಡ ರಚನೆ
ಮತದಾನ ಕೇಂದ್ರಗಳ ವೆಬ್ಕಾಸ್ಟಿಂಗ್ ವೀಕ್ಷಿಸಲು, ವಾಹನಗಳ ಜಿಪಿಎಸ್ ಟ್ರ್ರಾಕಿಂಗ್ ವ್ಯವಸ್ಥೆ ವೀಕ್ಷಿಸಲು, ಇವಿಎಂಗಳ ಸಮಸ್ಯೆ ಉಂಟಾದಲ್ಲಿ ಬಗೆಹರಿಸಲು ಜಿಲ್ಲಾ ಮಟ್ಟದ ತಂಡ ರಚಿಸಲಾಗಿದೆ. ಈ ತಂಡಗಳು ಬೆಳಗ್ಗೆ 5:30ರಿಂದ ಸಂಜೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾರ್ಯನಿರ್ವಹಿಸಲಿವೆ. ಉಡುಪಿ ಜಿಲ್ಲೆಯಲ್ಲಿ 866 ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ 791 ಮತಗಟ್ಟೆ ಕೇಂದ್ರಗಳಿಗೆ ವೆಬ್ಕಾಸ್ಟಿಂಗ್ ಅಳವಡಿಸಿದ್ದು, ಈ ಮತಗಟ್ಟೆಗಳಲ್ಲಿ ನಡೆಯುವ ಪ್ರತಿಯೊಂದು ಕ್ಷಣವನ್ನೂ ನೇರವಾಗಿ ವಾರ್ರೂಮಿನಿಂದ ವೀಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು.