ನವದೆಹಲಿ: ಲಡಾಖ್ನ ಪೂರ್ವಭಾಗದಲ್ಲಿ ಚೀನಾ ತೋರುತ್ತಿರುವ ಆಕ್ರಮಣಕಾರಿ ಮನೋಭಾವ ಹಾಗೂ ಭಾರತೀಯ ಯೋಧರ ಹತ್ಯೆಯ ಪ್ರಮಾದಕ್ಕೆ ಹಲವು ದಶಕಗಳವರೆಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ವ್ಯೂಹಾತ್ಮಕ ವ್ಯವಹಾರಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಡೀ ವಿಶ್ವವೇ ಕೋವಿಡ್-19ನಂಥ ಮಾರಕ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಇಂಥ ಸಮಯವನ್ನು ಬಳಸಿಕೊಂಡು ಚೀನಾ ಭಾರತದ ವಿರುದ್ಧ ಆಕ್ರಮಣಕಾರಿ ಮನೋಭಾವ ತೋರುತ್ತಿದೆ. ಇದರಿಂದ ಚೀನಾದ ನಿಜ ಬಣ್ಣ ಜಾಗತಿಕವಾಗಿ ಬಯಲಾಗಿದೆ. ಕಳೆದ ಕೆಲವು ತಿಂಗಳಿಂದ ಲಡಾಖ್ನಲ್ಲಿ ತೋರುತ್ತಿರುವ ಇಂಥ ದುಸ್ಸಾಹಸದಿಂದಾಗಿ ಆರ್ಥಿಕವಾಗಿ ಅದಕ್ಕೆ ತುಂಬಾ ನಷ್ಟವಾಗಲಿದೆ ಎಂದು ಹೇಳಿದ್ದಾರೆ.
ಅಮೆರಿಕದೊಂದಿಗಿನ ಚೀನಾದ ತೆರಿಗೆ ಘರ್ಷಣೆ, ವ್ಯಾಪಾರ-ವಹಿವಾಟು ಸಂಬಂಧಿತ ಆಸ್ಟ್ರೇಲಿಯಾದೊಂದಿಗಿನ ಜಟಾಪಟಿ ಹಾಗೂ ಹಾಂಕಾಂಗ್ನಲ್ಲಿ ಕ್ಷಣಕ್ಷಣಕ್ಕೂ ವಿಷಮಿಸುತ್ತಿರುವ ಪರಿಸ್ಥಿತಿಯಿಂದಾಗಿ ಅದು ಜಾಗತಿಕವಾಗಿ ಏಕಾಂಗಿಯಾಗುವ ಅಪಾಯಕ್ಕೂ ಒಳಗಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗ್ರಾಹಕರು ಮಾಸ್ಕ್ ಧರಿಸದಿದ್ದರೂ ಅಂಗಡಿ ಮಾಲೀಕರಿಗೆ ದಂಡ, ನಗರದಲ್ಲಿ ಪೊಲೀಸರ ದಾಳಿ
ಈ ಎಲ್ಲ ತಪ್ಪುಗಳಿಗಾಗಿ ಚೀನಾ ಭಾರಿ ಬೆಲೆ ತೆರಬೇಕಾಗುತ್ತದೆ. ಅದರ ಪಾಲಿಗೆ ಇದು ತುಂಬಾ ದುಬಾರಿಯಾಗಿ ಪರಿಣಮಿಸಲಿದೆ. ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಕ್ಕಾಗಿ ಅದು ಹಲವು ದಶಕಗಳವರೆಗೂ ಬೆಲೆ ತೆರಬೇಕಾಗುತ್ತದೆ. ಈ ಪಾಪ ಕೃತ್ಯಕ್ಕಾಗಿ ಅದು ಭಾರತದಲ್ಲಿ ಅಷ್ಟೇ ಅಲ್ಲ, ಜಾಗತಿಕವಾಗಿ ಸದ್ಭಾವನೆಯನ್ನು ಕಳೆದುಕೊಂಡಿದೆ ಎಂದು ಸೇನಾ ಸಿಬ್ಬಂದಿಯ ಮಾಜಿ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಹೇಳಿದ್ದಾರೆ.
ಗಲ್ವಾನ್ ಕಣಿವೆಯಲ್ಲಿನ ಚೀನಾದ ಮಾರಕ ದಾಳಿಯನ್ನು ಖಂಡಿಸಿದ ಅವರು, ಇದನ್ನು ಗಮನಿಸಿದಾಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಒಂದು ರಾಜಕೀಯ ಸೇನೆಯಾಗಿದೆ. ಇದು ಯಾವುದೇ ಮಿಲಿಟರಿ ನಿಯಮಗಳನ್ನು ಪಾಲಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.