ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಮತ್ತು ರಸ್ತೆ ಬದಿಯಲ್ಲಿ ಗೊಂಬೆ ಮತ್ತು ಹೂವುಗಳನ್ನು ಮಾರುವ ಮಕ್ಕಳು, ಬೀದಿ ಮಕ್ಕಳು, ಅನಾಥ ಮಕ್ಕಳು ಇತ್ಯಾದಿ ಕೆಲಸಗಳಲ್ಲಿ ನಿರತರಾಗಿರುವ ಮಕ್ಕಳನ್ನು ಗುರುತಿಸಿ ಸ್ಥಳೀಯ ಶಾಲೆಗಳಿಗೆ ದಾಖಲು ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷ ವಯೋಮಿತಿಯ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ)ಗಳಿಗೆ ಸೂಚನೆ ನೀಡಿದೆ.
ಈ ವೇಳೆ ಜನನ ಪ್ರಮಾಣ ಪತ್ರ, ವರ್ಗಾವಣೆ ಪತ್ರಗಳನ್ನು ನೀಡುವಂತೆ ಒತ್ತಾಯ ಮಾಡಬಾರದು. ನಂತರ ಕಡ್ಡಾಯ ಪ್ರಾಥಮಿಕ ಶಿಕ್ಷಣದ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಶೂ-ಸಾಕ್ಸ್ ವಿತರಣೆ ಹಾಗೂ ಇತ್ಯಾದಿ ಪ್ರೋತ್ಸಾಹದಾಯಕ ಯೋಜನೆಗಳನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳನ್ನು ದಾಖಲು ಮಾಡಲು ಮಾ.30ರವರೆಗೆ ಅವಕಾಶ ನೀಡಿದೆ.