ಚಳ್ಳಕೆರೆ: ತಾಲೂಕಿನ ಗಡಿಭಾಗ ಮೈಲನಹಳ್ಳಿ ಸಮೀಪ ನದಿ ತೀರದಲ್ಲಿ ಸಂಗ್ರಹಿಸಿದ ಅಕ್ರಮ ಮರಳನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಅಧಿಕಾರಿಗಳ ತಂಡ ಸೋಮವಾರ ತಡರಾತ್ರಿ ವಶಪಡಿಸಿಕೊಂಡಿದೆ.
ವೇದಾವತಿ ನದಿ ಮರಳನ್ನು ನಗರಗಳಿಗೆ ಅಕ್ರಮವಾಗಿ ಸಾಗಿಸಲು ಸಾವಿರಾರು ಬಿಳಿ ಚೀಲಗಳಲ್ಲಿ ಸಂಗ್ರಹಿಸಲಾಗಿತ್ತು. ಮರಳು ಸಂಗ್ರಹಿದ್ದು ಯಾರೆಂಬ ಮಾಹಿತಿ ಲಭ್ಯವಾಗಿಲ್ಲ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಲಿ ಮಾಡಿದರು.
ತಳಕು ಪೊಲೀಸ್ ಠಾಣಾ ಉಪನಿರೀಕ್ಷಕಿ ಅಶ್ವಿನಿ ಮಾತನಾಡಿ, ನದಿ ತೀರದಲ್ಲಿ 4 ಲೋಡ್ ಮರಳು ಸಂಗ್ರಹಿಸಲಾಗಿತ್ತು. ಅಕ್ರಮ ಮರಳು ಸಂಗ್ರಹದಾರರ ಪತ್ತೆಗೆ ನಿಗಾ ವಹಿಸಲಾಗಿತ್ತು. ಸ್ಥಳೀಯರ ಕೈವಾಡ ಇದ್ದ ಕಾರಣ, ರಾತ್ರಿ ಸಮಯದಲ್ಲಿ ಈ ಕೆಲಸ ಮಾಡುತ್ತಿದ್ದರು ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮರಳನ್ನು ಒಪ್ಪಿಸಲಾಗಿದೆ. ನದಿ ಭಾಗದಲ್ಲಿ ಅಕ್ರಮ ತಡೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ರೂಪ ಮತ್ತು ಪೊಲಿಸ್ ಸಿಬ್ಬಂದಿ ಇದ್ದರು.