ಬೆಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರ್.ಟಿ.ನಗರದ ನಿವಾಸಿ ದಾವೂದ್ ಪಾಷಾ ಅಲಿಯಾಸ್ ನಿಜಾಮ್ ಪಾಷಾ (46) ಬಂಧಿತ. ಆರೋಪಿಯಿಂದ ಲ್ಯಾಪ್ಟಾಪ್, ಮೊಬೈಲ್ ಹಾಗೂ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿ ದಾವೂದ್ ಪಾಷಾ ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ಆರ್.ಟಿ.ನಗರ ಸಮೀಪದ ಕನಕನಗರದಲ್ಲಿ ಎಕ್ಸ್ಲೆನ್ಸ್ ಎಂಟರ್ಪ್ರೈಸಸ್ ಕಂಪನಿಯನ್ನು ತೆರೆದಿದ್ದ. ಇತ್ತೀಚೆಗೆ ಖಾಸಗಿ ಕಂಪನಿಯೊಂದರ ಸೇಲ್ಸ್ಮನ್ ಪಿ.ಸಿ.ಶರ್ಮಾ ಎಂಬುವರು ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳಿಗಾಗಿ ಆನ್ಲೈನ್ನಲ್ಲಿ ಬೇಡಿಕೆ ಸಲ್ಲಿಸಿದ್ದರು. ಅದನ್ನು ಗಮನಿಸಿ ಇಮೇಲ್ ಮೂಲಕ ಸಂಪರ್ಕಿಸಿದ್ದ ದಾವೂದ್, ಕಡಿಮೆ ಬೆಲೆಗೆ ಸಾಮಗ್ರಿಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದ್ದ.
ಇದನ್ನೂ ಓದಿ: ಪಕ್ಷೇತರರನ್ನು ಸೆಳೆಯಲು ಕಸರತ್ತು ; ಕೋಲಾರ ನಗರವನ್ನಾಳಲು ನಾರಿಯರ ಪೈಪೋಟಿ
ಶರ್ಮಾ ಕರೆ ಮಾಡಿ ಮಾತನಾಡಿದಾಗ 8.33 ಲಕ್ಷ ರೂ. ಸಾಮಗ್ರಿ ಸರಬರಾಜು ಮಾಡಲು ದಾವೂದ್ ಒಪ್ಪಿದ್ದ. ಒಪ್ಪಂದದಂತೆ ದಾವೂದ್ ಖಾತೆಗೆ ಮುಂಗಡ ಹಣವಾಗಿ 4.17 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಬಳಿಕ ದಾವೂದ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದ. ಈ ಕುರಿತು ಶರ್ಮಾ ದೂರು ನೀಡಿದ್ದರು. ಪೊಲೀಸರು ಆರೋಪಿಯ ೆನ್ ನಂಬರ್ ಲೊಕೇಷನ್ ಪರಿಶೀಲಿಸಿದಾಗ, ಆರ್.ಟಿ.ನಗರದಲ್ಲಿರುವ ಸುಳಿವು ಸಿಕ್ಕಿತ್ತು. ಇದನ್ನು ಆಧರಿಸಿ ಬಂಧಿಸಲಾಗಿದೆ.
ಆರೋಪಿ ಇದೇ ರೀತಿ ಪ್ರತಿಷ್ಠಿತ ಕಂಪನಿಗಳ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಪೂರೈಸುವುದಾಗಿ ಹಲವರಿಗೆ ವಂಚಿಸಿರುವ ಬಗ್ಗೆ ಮಾಹಿತಿ ಇದೆ. ಆತನಿಂದ ವಂಚನೆಗೊಳಗಾದವರು ದೂರು ಕೊಟ್ಟರೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಆತ ತೆರೆದಿರುವ ಎಕ್ಸ್ಲೆನ್ಸ್ ಎಂಟರ್ಪ್ರೈಸಸ್ ಕಂಪನಿಯ ಬಗ್ಗೆ ಅನುಮಾನವಿದೆ. ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಗಿಫ್ಟ್- ನಿರ್ಮಲಾ ಸೀತಾರಾಮನ್ ಘೋಷಣೆ