More

    ಕೊಟ್ಟ ಕುದುರೆ ಏರದ ರಾಹುಲ್ ಗಾಂಧಿ ವೀರನೂ ಅಲ್ಲ, ಶೂರನೂ ಅಲ್ಲ: ಬಸವರಾಜ ಬೊಮ್ಮಾಯಿ

    ಗದಗ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೇಶ್ಯಾದ್ಯಂತ 40ಸ್ಥಾನ ಗೆಲ್ಲುವುದು ಕಷ್ಟವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
    ಅವರು ಇಂದು ರೋಣ ವಿಧಾನಸಭಾ ಕ್ಷೇತ್ರದ ಹಿರೇಹಾಳ, ಶಾಂತಗೇರಿ, ಮುಶಿಗೇರಿ ಹಾಗೂ ಇಟಗಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ಭಾರತ ಬದಲಾಗುತ್ತಿದೆ. ಬೇರೆ ದೇಶಗಳಿಗೆ ಪೈಪೋಟಿ ಕೊಟ್ಟು ಬೆಳೆಯುತ್ತಿದೆ. ಕೇವಲ ರಸ್ತೆ, ನೀರು ಕೊಡುವುದಷ್ಟೆ ಅಲ್ಲ. ಮಾಧ್ಯಮ, ಮೊಬೈಲ್ ಮೂಲಕ ಪ್ರತಿಯೊಬ್ಬರ ಕೈಯಲ್ಲಿ ಮಾಹಿತಿ ದೊರೆಯುವುದರಿಂದ ಜಗತ್ತಿನ ಎಲ್ಲ ಮಾಹಿತಿ ದೊರೆಯುವಂತಾಗಿದೆ. ಎಲ್ಲರ ಕೈಗೆ ಮಾಹಿತಿ ತಂತ್ರಜ್ಞಾನ ನೀಡಿದ್ದು ಪ್ರಧಾನಿ ನರೆಂದ್ರ ಮೋದಿಯವರು ಎಂದರು.
    ಕಾಂಗ್ರೆಸ್ ನವರು ಗರಿಬಿ ಹಠಾವೊ ಅಂತ ಹೇಳಿದರು. ಆದರೆ ಇದುವರೆಗೂ ಬಡತನ ನಿರ್ಮೂಲನೆ ಆಗಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಮೋದಿಯವರು 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದಾರೆ. ರಾಜ್ಯದಲ್ಲಿ 36 ಲಕ್ಷ ಜನರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ದೊರೆತಿದೆ. 58 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ದೊರೆತಿದೆ.12 ಲಕ್ಷ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಇದೆಲ್ಲವನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ಬು ಮೋದಿಯವರು ಮಾಡಿದ್ದಾರೆ. ಮೋದಿಯವರು ಅಕ್ಕಿ ಕೊಡುತ್ತಿದ್ದಾರೆ. ಇವರು ತಮ್ಮದೇ ಭಾಗ್ಯ ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದರು.

    40 ಸ್ಥಾನ ಗೆಲ್ಲುವುದಿಲ್ಲ
    ಈಗ ನಡೆದಿರುವ ಸಮೀಕ್ಷೆ ಪ್ರಕಾರ ದೇಶದಲ್ಲಿ ಕಾಂಗ್ರೆಸ್ ಈ ಚುನಾವಣೆಯಲ್ಲಿ 40 ಸ್ಥಾನ ಗೆಲ್ಕುವುದು ಕಷ್ಟವಿದೆ. ಸಮೀಕ್ಷೆ ಪ್ರಕಾರ ಬಿಜೆಪಿ 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ. ಕಾಂಗ್ರೆಸ್ 40 ಸ್ಥಾನ ಮಾತ್ರ ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿದೆ.
    ಇಂಡಿ ಒಕ್ಕೂಟದ 26 ಪಕ್ಷಗಳಲ್ಲಿ ಪಿಎಂ ಆಗುವ ಅರ್ಹತೆ ಇರುವವರು ಯಾರೂ ಇಲ್ಲ. ಮೋದಿಯವರ ಸಮಾನಾದ ನಾಯಕರು ಯಾರೂ ಇಲ್ಲ.‌ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಹೆಸರು ಹೆಳಿದರು. ಆದರೆ, ಸಿದ್ದರಾಮಯ್ಯ ರಾಹುಲ್ ಗಾಂಧಿ ಅಂತ ಹೇಳಿದರು. ರಾಹುಲ್ ಗಾಂಧಿ ನಾನು ಪ್ರಧಾನಿ ಆಗುವುದಿಲ್ಲ ಅಂತ ಹೇಳಿದ್ದಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ. ಅದು ರಾಹುಲ್ ಗಾಂಧಿ. ಸವಾಲನ್ನು ಸ್ವೀಕಾರ ಮಾಡಿ ಅದನ್ನು ಗೆಲುವಾಗಿ ಪರಿವರ್ತಿಸುವ ಛಲ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. ಹೀಗಾಗಿ ಮೋದಿಯವರು ಜನರ ನಾಯಕ ಆಗಿದ್ದಾರೆ ಎಂದು ಹೇಳಿದರು.
    ಶಿಗ್ಗಾವಿ ರೀತಿ ಅಭಿವೃದ್ಧಿ
    ನಾನು ವಿಧಾನ ಪರಿಷರ್ ಸದಸ್ಯನಾಗಿ ಈ ಭಾಗದಲ್ಲಿ ಕಳಸಾ ಬಂಡೂರಿ ಹೋರಾಟ ಮಾಡಿದ್ದೇನೆ. ಕಳಕಪ್ಪ ಬಂಡಿಯವರು ಶಾಸಕರಾದಾಗ ಈ ಭಾಗದ ಅಭಿವೃದ್ಧಿ ಆಗಿದೆ. ನಮ್ಮ ಶಿಗ್ಗಾವಿ ಕ್ಷೇತ್ರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಆಗಿ ಈಗ ಔದ್ಯೋಗಿಕರಣ ಆಗುತ್ತಿದೆ. ಸುಮಾರು 10 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯುತ್ತಿದೆ. ನಾನು ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಸ್ಪರ್ಧೆ ಮಾಡಿದ್ದೇನೆ. ಕಳಕಪ್ಪ ಬಂಡಿಯವರಿಗೆ ಆಗಿರುವ ಅನ್ಯಾಯಕ್ಕೆ ಈ ಕ್ಷೇತ್ರದ ಅಭಿವೃದ್ಧಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ. ಜನರ ಪಾಲ್ಗೊಳ್ಳುವಿಕೆಯಿಂದ ಅಭಿವೃದ್ಧಿ ಆಗಬೆಕು ಅದು ನಿಜವಾದ ಅಭಿವೃದ್ಧಿ ಅದೇ ಪ್ರಜಾಪ್ರಭುತ್ವದ ಆಶಯವಾಗಿದೆ. ಅದೇ ರೀತಿ ನಾನು ನಿರಂತರ ಅಭಿವೃದ್ಧಿ ಮಾಡಲು ಸ್ಪರ್ಧೆ ಮಾಡಿದ್ದೇನೆ ಎಂದರು.
    ಮೋದಿಯವರು ಹತ್ತು ವರ್ಷದಲ್ಲಿ ದೇಶದ ಅಭಿವೃದ್ದಿಗೆ ವೇಗ ನೀಡಿದ್ದಾರೆ. ಅವರು ಗುರಿ ಮುಟ್ಟಲು ಅವರನ್ನು ಮತ್ತೆ ಪ್ರಧಾನ ಮಂತ್ರಿಯಾಗಿ ಮಾಡಬೇಕು. ಇಲ್ಲದಿದ್ದರೆ ನಾವು ಮತ್ತೆ ಹಿನ್ನಡೆ ಅನುಭವಿಸಬೇಕಾಗುತ್ತದೆ. ಪಾಕಿಸ್ತಾನದಂತ ರಾಷ್ಟ್ರ ನಮ್ಮ ಮೇಲೆ ದಾಳಿ ಮಾಡುವಂತಾಗಿತ್ತು. ಮೋದಿಯವರು ಅವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಮೋದಿಯವರು ನಗರದಿಂದ ಗ್ರಾಮೀಣದವರೆಗೆ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಿದ್ದಾರೆ. ಅವರು ಮತ್ತೆ ಬಂದರೆ ನಮ್ಮ ಊರು ಆರ್ಥಿಕವಾಗಿ ಸಬಲವಾಗುತ್ತದೆ. ಅದರಿಂದ ನಮ್ಮ ಆರ್ಥಿಕತೆ ಬಲಗೊಳ್ಳುತ್ತದೆ ಎಂದರು.


    ಬೊಮ್ಮಾಯಿ ಪ್ರಚಾರಕ್ಕೆ ಮಳೆಯ ಸಿಂಚನ
    ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ರೋಣ ವಿಧಾನಸಭಾ ಕ್ಷೇತ್ರದ ಹಿರೇಹಾಳ ಗ್ರಾಮಕ್ಕೆ ತಲುಪುತ್ತಿದ್ದಂತೆ ಮಳೆ ಸಿಂಚನವಾಯಿತು.
    ಮಳೆ ಹನಿಯ ನಡುವೆಯೇ ನೆರೆದಿದ್ದ‌ ಜನರನ್ನು ಉದ್ದೇಶಿಸಿ ಮಾತನಾಡಿ, ಮಳೆ ಶುಭ ಸಂಕೇತ ಕಾಂಗ್ರೆಸ್ ನಲ್ಲಿ ಐದು ಗ್ಯಾರಂಟಿ ಜೊತೆ ಬರ ಗ್ಯಾರಂಟಿ. ಆಗಿದೆ. ಮಳೆ ಬಂದರೆ ಮೊದಿ ಸರ್ಕಾರ ಬರುತ್ತದೆ ಎಂಬ ಗ್ಯಾರಂಟಿ ಇದೆ. ಮಳೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ಹೇಳಿ ಬಸವರಾಜ ಬೊಮ್ಮಾಯಿ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts