ನವದೆಹಲಿ: ಬಾಂಗ್ಲಾದೇಶ ವಿರುದ್ಧ ನಿನ್ನೆ (ಅಕ್ಟೋಬರ್ 19) ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯಗಳಿಸಿ ಸಂಭ್ರಮದಲ್ಲಿರುವ ಭಾರತ ತಂಡಕ್ಕೆ ದೊಡ್ಡ ಶಾಕ್ ಎಂದು ಎದುರಾಗಿದೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ತನ್ನ ಮುಂದಿನ ಪಂದ್ಯ ಆಡಲಿರುವ ಭಾರತ ತಂಡದ ಪ್ರಮುಖ ಆಟಗಾರರೊಬ್ಬರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ.
ನಿನ್ನೆ (ಅಕ್ಟೋಬರ್ 19) ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ, ಕಿವೀಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಬಿಸಿಸಿಐ ಗುರುವಾರ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 9ನೇ ಓವರ್ ಎಸೆಯುವ ವೇಳೆ ಹಾರ್ದಿಕ ಪಾಂಡ್ಯ ಎಡ ಪಾದದ ಗಾಯಕ್ಕೆ ಒಳಗಾಗಿದ್ದರು. ಬಳಿಕ ಪಾಂಡ್ಯರ ಪಾದದ ಸ್ಕ್ಯಾನ್ನಿಂಗ್ ಮಾಡಲಾಗಿದ್ದು, ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧ ಕಿಂಗ್ ಕೊಹ್ಲಿ ಶತಕ; ಭಾರತಕ್ಕೆ 7 ವಿಕೆಟ್ಗಳ ಜಯ
ಹಾರ್ದಿಕ್ ಪಾಂಡ್ಯ ಬಿಸಿಸಿಐ ವೈದ್ಯಕೀಯ ತಂಡದ ನಿರಂತರ ಮೇಲ್ವಿಚಾರಣೆಯಲ್ಲಿದ್ದಾರೆ. ಹೀಗಾಗಿ ಅಕ್ಟೋಬರ್ 20 ರಂದು ತಂಡದೊಂದಿಗೆ ಧರ್ಮಶಾಲಾಗೆ ಹೋಗುತ್ತಿಲ್ಲ. ಬದಲಿಗೆ ಲಖನೌನಲ್ಲಿ ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ನೇರವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಹೊರಗುಳಿದರೆ ಅವರ ಬದಲಿಗೆ ಬ್ಯಾಟ್ಸ್ಮನ್ಗಳಾದ ಇಶಾನ್ ಕಿಶನ್ ಅಥವಾ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಊಹಿಸಲಾಗಿದೆ. ಒಂದು ವೇಳೆ ಭಾರತ ತಂಡ ಬೌಲಿಂಗ್ ಆಯ್ಕೆಯನ್ನು ಪರಿಗಣಿಸಿದರೆ ಮೊಹಮ್ಮದ್ ಶಮಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.