ಬೆಂಗಳೂರು: ಕರೊನಾ ಲಾಕ್ಡೌನ್ ಎಫೆಕ್ಟ್ ಹೇಗಿದೆ ಅಂದ್ರೆ ಮಕ್ಕಳ ಮದುವೆಗೆ ಸ್ವತಃ ತಂದೆ-ತಾಯಿ ಖುದ್ದು ಭಾಗವಹಿಸದಂತಾಗಿದೆ. ಇತ್ತೀಚೆಗೆ ಗುರುಗ್ರಾಮ್ನಲ್ಲಿ ಬೆಂಗಳೂರು ಮೂಲದ ಪೈಲಟ್ವೊಬ್ಬರ ವಿವಾಹ ನಡೆಯಿತು. ಅಲ್ಲಿಗೆ ಹೋಗಲು ಆಗದ ವರನ ಪಾಲಕರು ವಿಡಿಯೋ ಕಾಲ್ನಲ್ಲೇ ಮಗ-ಸೊಸೆಗೆ ಆರತಿ ಮಾಡಿ ಬೆಂಗಳೂರಿನ ಮನೆ ತುಂಬಿಸಿಕೊಂಡಿದ್ದರು. ಇಂತಹದ್ದೇ ಮತ್ತೊಂದು ಮದುವೆಗೆ ರಾಜಧಾನಿ ಬುಧವಾರ ಸಾಕ್ಷಿಯಾಯಿತು.
ಇದನ್ನೂ ಓದಿ ಕರೊನಾ ಗೆದ್ದ 113 ವರ್ಷದ ಅಜ್ಜಿ ..!
ಶಿವಮೊಗ್ಗ ಜಿಲ್ಲೆ ಹೊಸೂರು ತಾಲೂಕಿನ ಕೋಡೂರು ಜಯಲಕ್ಷ್ಮೀ ಮತ್ತು ಲಕ್ಷ್ಮೀನಾರಾಯಣ ಜೋಯ್ಸ್ ಅವರ ಪುತ್ರ ಕೆ.ಎಲ್. ಶಿವಶ್ಚಂದ್ರ ಜೋಯ್ಸ್ ಜತೆ ಶೈಲಜಾ ಮತ್ತು ಚಂದ್ರಶೇಖರ್ ಪುತ್ರಿ ಸಿ. ಕಾವ್ಯಾ ಮದುವೆ ನಿಶ್ಚಯವಾಗಿತ್ತು. ಮೇ 13 ರಂದು ಬೆಂಗಳೂರಿನ ಬಸವನಗುಡಿಯ ‘ಶ್ರೀ ಚಂದ್ರಶೇಖರಭಾರತೀ ಕಲ್ಯಾಣ’ ಮಂಟಪದಲ್ಲಿ ಇವರ ಮದುವೆ ನೆರವೇರಿಸಲು ಎರಡೂ ಕುಟುಂಬದ ಗುರುಹಿರಿಯರು ನಿರ್ಧರಿಸಿದ್ದರು. ಅದರಂತೆ ಲಗ್ನ ಪತ್ರಿಕೆಯೂ ಪ್ರಿಂಟ್ ಆಗಿತ್ತು.
ಎಲ್ಲೆಡೆ ಲಾಕ್ಡೌನ್ ಛಾಯೆ ಆವರಿಸಿದ್ದರಿಂದ ಪೂರ್ವ ನಿಗದಿಯ ಮದುವೆ ಸ್ಥಳ ಬದಲಾಯಿತು. ನಿಗದಿತ ದಿನಾಂಕದಂದೇ ಬೆಂಗಳೂರಿನಲ್ಲಿ ವಧುವಿನ ಸೋದರ ಮಾವನ ಮನೆಯಲ್ಲಿ ಶಿವಶ್ಚಂದ್ರ ಮತ್ತು ಶೈಲಜಾ ಮದುವೆ ಸರಳವಾಗಿ ನೆರವೇರಿತು.
ಈ ಮದುವೆಗೆ ಖುದ್ದು ಹಾಜರಿರದ ವರನ ತಂದೆ-ತಾಯಿ ಶಿವಮೊಗ್ಗದಲ್ಲಿ ತಮ್ಮ ಮನೆಯಲ್ಲೇ ಕುಳಿತು ವಾಟ್ಸ್ಆ್ಯಪ್ ವಿಡಿಯೋ ಕಾಲ್ನಲ್ಲೇ ಮಗನ ಮದುವೆ ಸಂಭ್ರಮ ಕಣ್ತುಂಬಿಕೊಂಡರು. ವಿಡಿಯೋ ಕನೆಕ್ಟ್ ಮಾಡಿದ್ದ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಯನ್ನು ಆಶೀರ್ವದಿಸಿದರು. ಈ ಮದುವೆಗೆ ಬೆಂಗಳೂರಿನಲ್ಲೇ ಇರುವ ವರನ ಅಕ್ಕ ಮತ್ತು ಭಾವ ಸಾಕ್ಷಿಯಾದರು. ಎರಡೂ ಕುಟುಂಬದ ಕಡೆಯಿಂದ ಒಟ್ಟಾರೆ 35 ಜನರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ ನಿಖಿಲ್ ಮದುವೆಗೆ ನೀಡಿದ್ದ ವಾಹನ ಪಾಸ್ಗಳೆಷ್ಟು?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮದುವೆಯಲ್ಲಿ ವರನ ತಂದೆ-ತಾಯಿ ಸೇರಿ ಎರಡೂ ಕಡೆಯ ಸಂಬಂಧಿಕರು, ಸ್ನೇಹಿತರು ಪಾಲ್ಗೊಳ್ಳುತ್ತಿದ್ದರು. ಮೇ 15ರಂದು ವರನ ಸ್ವಗ್ರಾಮ ಹೊಸನಗರ ತಾಲೂಕು ಕೋಡೂರಿನ ಶ್ರೀ ಶಂಕರೇಶ್ವರ ದೇವಸ್ಥಾನ ಆವರಣದಲ್ಲಿ ಆರತಕ್ಷತೆ ಕೂಡ ನಡೆಯುತ್ತಿತ್ತು. ಇದೆಲ್ಲಕ್ಕೂ ಲಾಕ್ಡೌನ್ ಬ್ರೇಕ್ ಹಾಕಿದೆ.
ಮಗನ ಮದುವೆಯಲ್ಲಿ ಖುದ್ದು ಪಾಲ್ಗೊಳ್ಳಲು ಆಗಲಿಲ್ಲ ಎಂದು ತುಂಬಾ ದುಃಖ ಆಯ್ತು. ಕರೊನಾ ಪರಿಸ್ಥಿತಿ ಅರಿತು ಸಮಾಧಾನ ಮಾಡಿಕೊಂಡಿದ್ದೇವೆ. ಮಗ-ಸೊಸೆಗೆ ನಾವಿದ್ದ ಜಾಗದಿಂದಲೇ ಆಶೀರ್ವದಿಸಿದ್ದೇವೆ. ಅವರ ದಾಂಪತ್ಯ ಸುಖಕರವಾಗಿರಲಿ. ದೇವರು ಆಯುಷ್, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ವರನ ತಂದೆ ಲಕ್ಷ್ಮೀನಾರಾಯಣ ಜೋಯ್ಸ್ ಹೇಳಿದರು.
ಇದನ್ನೂ ಓದಿ ಗುರುಗ್ರಾಮ್ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!