ಬೆಂಗಳೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಶಾರೀಕ್ ಬಳಿ ಇದ್ದ ಸ್ಫೋಟಕದ ಸಾಮರ್ಥ್ಯ ತಿಳಿದು ಅನೇಕರು ದಂಗಾಗಿದ್ದರು. ಈತನಿಂದಾಗಿ ಮೈಸೂರು ನಗರದ ಅನೇಕ ಬಾಡಿಗೆದಾರರು ಪೊಲೀಸರಿಗೆ ದಾಖಲೆ ಸಲ್ಲಿಸಲು ಅತ್ತಿಂದಿತ್ತ ಓಡಾಡಬೇಕಾಯಿತು. ಇಂತಹ ಗಂಭಿರ ಸ್ವರೂಪದ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇದೆ ಎಂದು ಈಗ ಬಿಜೆಪಿ ಹೇಳಿದೆ.
ತನ್ನ ಟ್ವಿಟರ್ ಖಾತೆಯಲ್ಲಿ ರಾಜ್ಯ ಬಿಜೆಪಿ, ‘ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ತಾಜುದ್ದೀನ್ ಎಂಬವನ ಪುತ್ರ ಈಗ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿತವಾಗಿ ಬಂಧಿತನಾಗಿದ್ದಾನೆ. ತಾಜುದ್ದೀನ್ @DKShivakumar, @siddaramaiah ಮತ್ತು @utkhader ಅವರ ಅತ್ಯಾಪ್ತನಾಗಿದ್ದಾನೆ. ಮಂಗಳೂರು ಸ್ಪೋಟದ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆಯಲು ಇದೇ ಕಾರಣವೇ?’ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ’ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿಯ ಪರವಾಗಿ @DKShivakumar ವಕಾಲತ್ತು ಸುಮ್ಮನೆ ವಹಿಸಿಲ್ಲ. ಬಾಂಬ್ ಸ್ಪೋಟ ಪ್ರಕರಣಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ನಂಟಿದೆ. ಬಾಂಬ್ ಸ್ಪೋಟದ ಆರೋಪಿಯೊಂದಿಗೆ ಬ್ಲಾಕ್ ಕಾಂಗ್ರೆಸ್ ಜವಾಬ್ದಾರಿಯಿರುವ ವ್ಯಕ್ತಿಯ ಪುತ್ರ ನೇರ ಸಂಪರ್ಕ ಹೊಂದಿದ್ದ’ ಎಂದು ನೇರವಾಗಿ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ, ಕೆಪಿಸಿಸಿಯಲ್ಲಿ ಉಗ್ರ ಸೆಲ್ ತೆರೆಯುವ ಯೋಚನೆ ಇದೆಯೆ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.