ಶಿಕಾರಿಪುರ: ಬಿಜೆಪಿಗೆ ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲ. ಕೇವಲ ಅಂಬಾನಿ, ಅದಾನಿ ಅವರ ಆಸ್ತಿ ಜಾಸ್ತಿ ಮಾಡಿ ಆರ್ಥಿಕವಾಗಿ ದೇಶವನ್ನು ಮೊದಲ ಸ್ಥಾನಕ್ಕೆ ತಂದರೆ ಅದು ಪ್ರಗತಿಯಲ್ಲ. ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡುವತ್ತ ಗಮನಹರಿಸಬೇಕು. ಬಿಜೆಪಿ ಉದ್ಯಮಿಗಳ ಪರವಾದ ಪಕ್ಷ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ದೂರಿದರು.
ರಾಜ್ಯದಲ್ಲಿ ಶತಮಾನ ಕಂಡ ಭೀಕರ ಬರಗಾಲ ಬಂದರೂ ಕೇಂದ್ರ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿರಲಿಲ್ಲ. ಸುಪ್ರೀಂಕೋರ್ಟ್ ಚಾಟಿ ಬೀಸಿದ ಮೇಲೆ ಕೇವಲ ಮೂರು ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ನಾವು ಕೇಳಿದ್ದು 18 ಸಾವಿರ ಕೋಟಿ ರೂ. ಕೇಂದ್ರದ ಮಲತಾಯಿ ಧೋರಣೆ ಜನರಿಗೆ ಅರ್ಥವಾಗಿದೆ. ಪದೇ ಪದೆ ಜನರನ್ನು ಮೋಸಮಾಡಲು ಸಾಧ್ಯವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಕಾನೂನು ವ್ಯಾಪ್ತಿಯಲ್ಲಿ ತನಿಖೆ ನಡೆಯುತ್ತಿದೆ. ಮೈತ್ರಿ ಅಭ್ಯರ್ಥಿ ಎನ್ನುವ ಕಾರಣಕ್ಕೆ ಪ್ರಧಾನಿಯೇ ಪ್ರಜ್ವಲ್ ಪರವಾಗಿ ಮತಯಾಚನೆ ಮಾಡಿದ್ದರು ಎಂದರು.
ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಪಾರಿವಾಳ ಶಿವರಾಂ, ಪ್ರಮುಖರಾದ ಷಡಕ್ಷರಿ, ಎನ್.ಅರುಣ್, ಮಾಲತೇಶ್, ಬನ್ನೂರು ಮಂಜಪ್ಪ, ರೋಷನ್, ಉಮೇಶ್ ಮಾರವಳ್ಳಿ ಇದ್ದರು.