ಜೈಪುರ: ರಾಜಸ್ಥಾನದಲ್ಲಿ ಜೂ.19ರಂದು ರಾಜಸಭೆ ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಶಾಸಕರ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೆ ಅನುಕೂಲವಾಗಲೆಂದೇ ಬಿಜೆಪಿ ರಾಜ್ಯಸಭೆ ಚುನಾವಣೆಗಳನ್ನು ಬೇಕೆಂದೇ ಎರಡು ತಿಂಗಳು ವಿಳಂಬ ಮಾಡಿತ್ತು ಎಂದು ದೂರಿದರು.
ರಾಜ್ಯಸಭೆ ಚುನಾವಣೆಗಳು ಕೊನೆಗೂ ನಿಗದಿಯಾಗಿದೆ. ಈ ಚುನಾವಣೆಗಳು ಎರಡು ತಿಂಗಳ ಹಿಂದೆಯೇ ಆಗಬೇಕಿತ್ತು. ಆದರೆ, ಶಾಸಕರ ಖರೀದಿ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬಿಜೆಪಿ ಅದನ್ನು ಬೇಕೆಂದೇ ವಿಳಂಬ ಮಾಡಿತ್ತು ಎಂದು ಹೇಳಿದರು.
ಬಿಜೆಪಿಗೆ ಕಾದಿದೆ ಭಾರಿ ಆಘಾತ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಆಘಾತ ಕಾದಿದೆ. ಈ ಆಘಾತ ನೀಡಲು ಕಾಂಗ್ರೆಸ್ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ಅಶೋಕ್ ಗೆಹ್ಲೋಟ್ ತಿಳಿಸಿದರು.
ಇದನ್ನೂ ಓದಿ: ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್; ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಗಂಗೂಲಿ ಪತ್ರ
ಕಾಂಗ್ರೆಸ್ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ಯಾವುದೇ ಕಾರಣಕ್ಕೂ ಮಾರಾಟವಾಗದಿರಲು ನಿರ್ಧರಿಸಿದ್ದು, ಚುನಾವಣೆಯಲ್ಲಿ ಪಕ್ಷದ ವಿಪ್ ಅನ್ನು ಆನೂಚಾನವಾಗಿ ಪಾಲಿಸಲಿದ್ದಾರೆ ಎಂದು ಹೇಳಿದರು.
ಕುದುರೆ ವ್ಯಾಪಾರ ಎಷ್ಟು ಕಾಲ ನಡೆಯಲು ಸಾಧ್ಯ? ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಆಘಾತ ನೀಡುವುದು ಶತಃಸಿದ್ಧ. ನಾವೆಲ್ಲರೂ ಒಂದಾಗಿದ್ದೇವೆ. ಇಂದಿನ ಸಭೆಯಲ್ಲಿ ಇದೇ ಮನೋಭಾವ ವ್ಯಕ್ತವಾಗಿದೆ. ನಾಳೆಯೂ ಸಭೆ ಸೇರಲಿದ್ದೇವೆ ಎಂದು ತಿಳಿಸಿದರು.
3 ಶಾಸಕರು ಗುಜರಾತ್ಗೆ: ಶಾಸಕರು ಬಿಜೆಪಿಗೆ ಮಾರಾಟವಾಗುವ ಭೀತಿಯಲ್ಲಿ ಗುಜರಾತ್ ಕಾಂಗ್ರೆಸ್ ತನ್ನ 22 ಶಾಸಕರನ್ನು ರಾಜಸ್ಥಾನದ ಮೌಂಟ್ ಅಬುನಲ್ಲಿರುವ ರೆಸಾರ್ಟ್ನಲ್ಲಿ ಇರಿಸಿತ್ತು. ಇವರಲ್ಲಿ ಪ್ರಾರ್ಥನೆ ಸಲ್ಲಿಸಿಬರುವುದಾಗಿ ಹೇಳಿ ರೆಸಾರ್ಟ್ನಿಂದ ಹೊರಬಂದಿದ್ದ ಮೂವರು ಶಾಸಕರು ಗುಜರಾತ್ಗೆ ಮರಳಿದ್ದಾರೆ. ಹಣದ ಆಮಿಷ ಒಡ್ಡಿ ಬಿಜೆಪಿ ಇವರನ್ನು ತನ್ನೆಡೆಗೆ ಸೆಳೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಾಕ್ನ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮ