ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಗುರುವಾರ ಬೆಳಗ್ಗೆ ಬಂದ ಭಟ್ಕಳದ ಎಂಟು ಪರ್ಸೀನ್ ಮೀನುಗಾರಿಕಾ ಬೋಟುಗಳನ್ನು ಸ್ಥಳೀಯ ಮೀನುಗಾರರಿಂದ ವಿರೋಧ ವ್ಯಕ್ತವಾದ ಬಳಿಕ ವಾಪಸ್ ಕಳುಹಿಸಲಾಯಿತು.
ಕರೊನಾ ಸೋಂಕಿತರಿರುವ ಭಟ್ಕಳದಿಂದ ಬೋಟುಗಳು ದುರಸ್ತಿ, ಕಚೇರಿ ಕಟ್ಟುವ ನೆಪದಲ್ಲಿ ಉತ್ತಮ ವಾತಾವರಣವಿರುವ ಗಂಗೊಳ್ಳಿಗೆ ಬಂದಿರುವುದು ಕಾನೂನು ಬಾಹಿರ. ಬೋಟುಗಳಲ್ಲಿ ಹೊರರಾಜ್ಯದ ಮೀನುಗಾರರಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಮಾಡಬೇಕು, ಇಲ್ಲವೇ ಬೋಟುಗಳನ್ನು ಭಟ್ಕಳಕ್ಕೆ ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದ ಸ್ಥಳೀಯ ಮೀನುಗಾರರು ಸಾಂಕೇತಿಕವಾಗಿ ಪ್ರತಿಭಟಿಸಿದರು.
ಭಟ್ಕಳದಿಂದ 16 ಬೋಟುಗಳು ಗಂಗೊಳ್ಳಿ ಬಂದರಿಗೆ ಹೊರಟಿದ್ದು, ಎಂಟು ಬೋಟುಗಳು ತಲುಪಿವೆ. ಅಧಿಕಾರಿಗಳ ಕಣ್ತಪ್ಪಿಸಿ ಇಲ್ಲಿಗೆ ಮತ್ತೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಮೇ 31ರ ತನಕ ಅನ್ಯ ಜಿಲ್ಲೆಗಳ ಬಂದರುಗಳಲ್ಲಿ ತಂಗಿರುವ ಬೋಟುಗಳು ಗಂಗೊಳ್ಳಿಗೆ ಬಾರದಂತೆ ಮೀನುಗಾರರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಗಂಗೊಳ್ಳಿ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಕಾರ್ಯದರ್ಶಿ ದಿನೇಶ ಶೇರುಗಾರ್, ಮೀನುಗಾರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ದಾಖಲೆ ಪರಿಶೀಲನೆ: ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಅಂಜನಾದೇವಿ ಬೋಟ್ಗಳನ್ನು ವಾಪಸ್ ತೆರಳುವಂತೆ ಸೂಚಿಸಿದರು. ಲಾಕ್ಡೌನ್ ನಿಯಮ ಉಲ್ಲಂಘಿಸಿ ಬಂದಿರುವ ಬೋಟುಗಳ ದಾಖಲೆ ಪರಿಶೀಲಿಸಲಾಗಿದೆ. ಅದರಲ್ಲಿದ್ದ 20 ಮೀನುಗಾರರು ಹಾಗೂ ಬೋಟುಗಳನ್ನು ಪುನಃ ಭಟ್ಕಳಕ್ಕೆ ತೆರಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೀಪ ಜಿ.ಎಸ್. ಅವರು ಬೋಟುಗಳು ಮರಳಿ ಭಟ್ಕಳಕ್ಕೆ ಹೋಗುವಂತೆ ಆದೇಶಿಸಿ, ಗಂಗೊಳ್ಳಿ ಸರಹದ್ದು ದಾಟುವ ತನಕ ಇಲಾಖೆಯ ಬೋಟ್ನಲ್ಲಿ ಪೆಟ್ರೋಲಿಂಗ್ ನಡೆಸುವಂತೆ ಸೂಚನೆ ನೀಡಿದರು.