ಗಂಗೊಳ್ಳಿ: ಉತ್ತಮ ಹವ್ಯಾಸ ಸಾಧನೆಯ ಹಾದಿಗೆ ಹೊಸ ಹುಮ್ಮಸ್ಸು ತಂದು ಕೊಡುತ್ತದೆ. ಚಿತ್ರಕಲೆಯಂತಹ ಹವ್ಯಾಸ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ರೂಪಿಸಿಕೊಳ್ಳಲು ಹಾಗೂ ಕಲಿಕೆಗೆ ಪೂರಕ ಮನಸ್ಸು ಹೊಂದಲು ಸಹಕಾರಿ. ಇಂತಹ ಚಿತ್ರಕಲೆಯನ್ನು ಎಳೆಯ ವಯಸ್ಸಿನಲ್ಲಿ ಹವ್ಯಾಸವಾಗಿಸಿ, ಸ್ವಯಂಪ್ರೇರಣೆಯಿಂದ ಚಿತ್ರರಚನೆಯಲ್ಲಿ ತೊಡಗಿಸಿಕೊಂಡು ಗಮನಸೆಳೆಯುತ್ತಿರುವವರು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಪ್ರತಿಭೆ ತುಳಸಿ.
ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ ಪಿ.ವೆಲ್ಕಂ ಮತ್ತು ಉಪನ್ಯಾಸಕಿ ಮಾಲತಿ ದಂಪತಿ ಪುತ್ರಿ ತುಳಸಿ ಅವರು ಚಿತ್ರ ರಚನೆ ತರಗತಿಗಳಿಗೆ ಹೋದವರಲ್ಲ. ಯಾವುದೇ ಚಿತ್ರಕಲಾ ಶಿಕ್ಷಕರ ಬಳಿ ತರಬೇತಿ ಪಡೆದವರಲ್ಲ. ತಂದೆ ಗಣೇಶ ಅವರು ಬಿಡಿಸುತ್ತಿದ್ದ ಚಿತ್ರಗಳಿಂದ ಪ್ರೇರಣೆ, ಸ್ಫೂರ್ತಿ ಪಡೆದವರು. ತುಳಸಿ ಕೈಯಲ್ಲಿ ಈಗ ಮೂಡಿಬರುತ್ತಿರುವ ಸುಂದರ ಚಿತ್ರಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ರಾಮನವಮಿ ಪ್ರಯುಕ್ತ ತುಳಸಿ ರಚಿಸಿದ ಅಯೋಧ್ಯೆ ಬಾಲರಾಮನ ಚಿತ್ರ ವಿಶೇಷ ಆಕರ್ಷಣೆ ಹೊಂದಿದ್ದು, ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸಿದೆ.
ಕಲಾಸಕ್ತರಿಂದ ಮೆಚ್ಚುಗೆ
ಕರೊನಾ ಸಮಯದಲ್ಲಿ ಸಿಕ್ಕ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡು ಸ್ವಯಂಪ್ರೇರಣೆಯಿಂದ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಕರಗಳಲ್ಲಿ ಅರಳಿದ ಕೃಷ್ಣ, ಗಣೇಶ, ಬುದ್ಧ, ಮುದುಕಿ, ಸನ್ಯಾಸಿ, ಹಂಸ, ವೃದ್ಧ, ಪ್ರಕೃತಿ ಮೊದಲಾದ ಚಿತ್ರಗಳು ಅವರ ಕಲಾಪ್ರೌಢಿಮೆಯನ್ನು ಸಾರಿ ಹೇಳುತ್ತದೆ. ಬೆಣಚುಕಲ್ಲಿನಲ್ಲಿ ವೈವಿಧ್ಯಮಯ, ಆಕರ್ಷಕ ಚಿತ್ರಗಳನ್ನು ರಚಿಸಿದ್ದು, ಮಹಾಭಾರತದ ವಿವಿಧ ಸನ್ನಿವೇಶ, ಮಹಿಳೆಯರ ಮೇಲಿನ ದೌರ್ಜನ್ಯ, ನೀರಿನ ಸಮಸ್ಯೆ ಮೊದಲಾದವುಗಳ ಬಗ್ಗೆ ಬಿಡಿಸಿದ ಚಿತ್ರಗಳು ಕಲಾಸಕ್ತರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ಇತರ ವಿದ್ಯಾರ್ಥಿಗಳಿಗೆ ಪೇರಣೆ
ಸ್ಪರ್ಧೆಯ ಕಡೆಗೆ ಹೆಚ್ಚು ಆಸಕ್ತಿ ತೋರಿಸದ ತುಳಸಿ, ಚಿತ್ರ ಬಿಡಿಸುವುದರಲ್ಲೇ ಮನಸ್ಸಿಗೆ ನೆಮ್ಮದಿ, ಖುಷಿ, ಸಂತೃಪ್ತಿ ಸಿಗುತ್ತದೆ. ಅಷ್ಟು ಸಾಕು ಎನ್ನುವ ವಿನೀತ ಭಾವ ಹೊಂದಿದ್ದಾರೆ. ನವೀನ ಕಲ್ಪನೆ ಹಾಗೂ ಸೃಜನಶೀಲತೆ ಮೇಳೈಸಿಕೊಂಡು ಈ ನಿಟ್ಟಿನಲ್ಲಿ ಮತ್ತಷ್ಟು ತೊಡಗಿಸಿಕೊಂಡುವ ಹಂಬಲ ಈಕೆಗಿದೆ. ಮೊಬೈಲ್, ರೀಲ್ಸ್, ಟಿವಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಕಳೆದುಹೋಗಿರುವ ಇಂದಿನ ವಿದ್ಯಾರ್ಥಿಗಳಿಗೆ ತುಳಸಿಯಂತಹ ಪ್ರತಿಭೆಗಳು ನಿಜಕ್ಕೂ ಪ್ರೇರಣೆ ಆಗಬಲ್ಲರು.