ಭಾಲ್ಕಿ: ವಚನಗಳು ಬಸವಾದಿ ಶರಣರು ನೀಡಿರುವ ಅಮೂಲ್ಯ ಕೊಡುಗೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ವಚನ ಜಾತ್ರೆ-೨೦೨೪, ಅಕ್ಕಮಹಾದೇವಿ ಜಯಂತಿ ಉತ್ಸವ ಮತ್ತು ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೨೫ನೆಯ ಸ್ಮರಣೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಚನ ಪಾರಾಯಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ವಚನಗಳ ಪಾರಾಯಣದಿಂದ ಜೀವನದಲ್ಲಿ ಬಸವತತ್ವದ ನಿಜಾಚರಣೆ ಬರುತ್ತದೆ ಎಂದರು.
ಶರಣರು ಬೋಧಿಸಿದ ಮೌಲ್ಯಗಳು ನಮಗೆ ಆತ್ಮಬಲ ನೀಡುತ್ತವೆ. ಶರಣರು ಪ್ರಾಣ ಬಲಿದಾನ ನೀಡಿ ವಚನಗಳ ರಕ್ಷಣೆ ಮಾಡಿದರು. ನಾವು ಅವುಗಳ ಪಾರಾಯಣ, ಅಧ್ಯಯನ, ಅನುಷ್ಠಾನ ಮಾಡಿ ಶರಣ ಮಾರ್ಗ ಅನುಸರಿಸಬೇಕು. ಅಂದಾಗಲೇ ನಮ್ಮ ಜೀವನ ಸುಖಿಯಾಗುತ್ತದೆ ಎಂದು ಹೇಳಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಬಸವೇಶ್ವರಿ ತಾಯಿ ಸಮ್ಮುಖ ವಹಿಸಿದ್ದರು. ಪಾರಾಯಣ ಸೇವಾ ಸಮಿತಿ ಅಧ್ಯಕ್ಷೆ ಪಾರ್ವತಿ ಡೋಣಗಾಪುರೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಗಣಪತಿ ಬಾವುಗೆ, ಸುವರ್ಣಾ ಚಿಮಕೋಡೆ, ಶರಣಪ್ಪ ಚಿಮಕೋಡೆ, ಸಂಗ್ರಾಮಪ್ಪ ಇಂಗಳೆ, ಮಲ್ಲಮ್ಮ ನಾಗನಕೇರೆ ಇತರರಿದ್ದರು.
ಪಾರ್ವತಿ ಧುಮ್ಮನಸೂರೆ ಬಸವಗುರು ಪೂಜೆ ನೆರವೇರಿಸಿದರು. ಧುಮ್ಮನಸೂರೆ ಪರಿವಾರದಿಂದ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಬೀದರ್ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ದೀಪ ಬೆಳಗಿಸಿ ವಚನ ಪಾರಾಯಣಕ್ಕೆ ಚಾಲನೆ ನೀಡಿ ಅಕ್ಕನ ಯೋಗಾಂಗ ತ್ರಿವಿಧಿ ಹೇಳಿದರು.