ಬೆಳಗಾವಿ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಗುರುವಾರ ಗೋಕಾಕನಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಅಭಿನಂದಿಸಿದರು.
ಬಳಿಕ ಪ್ರಾಧಿಕಾರದ ವ್ಯಾಪ್ತಿಯ ಅಚ್ಚುಕಟ್ಟು ಭಾಗದ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳು ರಚಿಸಿರುವ ಸುಮಾರು 400 ಕೋಟಿ ರೂ. ಕ್ರಿಯಾ ಯೋಜನೆ ಹಾಗೂ ರೈತರಿಂದ ಬಂದ ಅರ್ಜಿಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮೇಶ ಜಾರಕಿಹೊಳಿ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದರು.
ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುವುದು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗಳ ಅನುಷ್ಠಾನ, ಕಾಲುವೆಗಳನ್ನು ನಿರ್ಮಾಣ ಸೇರಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಆದ್ಯತೆ ಮೇರೆಗೆ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ನೆಲ ಮತ್ತು ಜಲ ನಿರ್ವಹಣೆ ನಿರ್ದೇಶಕ ರಾಜೇಂದ್ರ ಪೋದ್ದಾರ್, ಮಲಪ್ರಭಾ ನೀರು ಬಳಕೆದಾರರ ಮಹಾ ಮಂಡಲದ ಅಧ್ಯಕ್ಷ ಅಶೋಕ ಕಂದ್ರತ್ತಿ, ನೆಲ ಮತ್ತು ಜಲ ನಿರ್ವಹಣೆ ಸಿಬ್ಬಂದಿ ಸುರೇಶ ಕುಲಕರ್ಣಿ ಉಪಸ್ಥಿತರಿದ್ದರು.