ಶಿವಮೊಗ್ಗ: ಭದ್ರಾವತಿ ತಾಲೂಕಿನ ಭದ್ರಾ ಜಲಾಶಯ ಭರ್ತಿಯಾಗಿದ್ದು ಕಳೆದ ಐದು ದಿನಗಳಿಂದ ನಾಲ್ಕು ಕ್ರಸ್ಟ್ಗೇಟ್ಗಳ ಮೂಲಕ ನದಿಗೆ ನೀರು ಹೊರ ಬಿಡಲಾಗುತ್ತಿದೆ. ಜಲರಾಶಿಯ ಸೊಬಗು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಜಲಾಶಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ನೀರಿನ ರಭಸಕ್ಕೆ ಜಲಾಶಯದ ಸಮೀಪವೇ ಭೂ ಕುಸಿತ ಉಂಟಾಗಿದ್ದು ತಡೆಗೋಡೆ ಕುಸಿದು ಬಿದ್ದಿದೆ.
ಭದ್ರಾ ಜಲಾಶಯದಿಂದ ಕೇವಲ ಅಂದಾಜು 200 ಮೀಟರ್ ದೂರದಲ್ಲಿ ನದಿ ತಡೆಗೋಡೆ ಕುಸಿದಿದೆ. ಆದರೂ ದುರಸ್ತಿ ಕಾಮಗಾರಿ ಅಥವಾ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಪೊಲೀಸ್ ಇಲಾಖೆಯ ಬ್ಯಾರಿಕೇಡ್ ಕೂಡ ಕುಸಿದು ನದಿಗೆ ಬಿದ್ದಿದೆ.
ಜಲಾಶಯದಿಂದ ನೀರು ಹೊರಬಿಟ್ಟಿರುವ ಕಾರಣದಿಂದ ಭಾರೀ ಸಂಖ್ಯೆಯ ಪ್ರವಾಸಿಗರು ವೀಕ್ಷಣೆಗೆ ಬರುತ್ತಿದ್ದಾರೆ. ತಡೆಗೋಡೆ ಕುಸಿತವಾಗಿರುವ ಸ್ಥಳದ ಬಳಿಯೇ ಓಡಾಡುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತುಂಬಿ ಹರಿಯುತ್ತಿರುವ ನದಿಗೆ ನಾಗರಿಕರು ಬೀಳುವ ಸಾಧ್ಯತೆಯಿದೆ ಎಂದು ಎಂದು ಪ್ರವಾಸಿಗರು ದೂರಿದ್ದಾರೆ. ತಕ್ಷಣವೇ ಭದ್ರಾ ಜಲಾಶಯ ಆಡಳಿತ ದುರಸ್ತಿ ಕಾರ್ಯ ನಡೆಸಬೇಕು. ಜತೆಗೆ ಸ್ಥಳದಲ್ಲಿ ಪ್ರವಾಸಿಗರ ಸಂಚಾರ ನಿರ್ಬಂಧಿಸಿ, ಸೂಕ್ತ ಬ್ಯಾರಿಕೇಡ್, ಮುನ್ನೆಚ್ಚರಿಕೆ ಫಲಕ ಹಾಕಬೇಕೆಂದು ಆಗ್ರಹಿಸಿದ್ದಾರೆ.