ಕೆ.ಎಂ.ದೊಡ್ಡಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಣ್ಣೂರು ಮತಗಟ್ಟೆ ಗಮನಸೆಳೆಯುತ್ತಿದೆ.
ಸಖಿ, ಯುವ, ಅಂಗವಿಕಲ, ಸಾಂಪ್ರದಾಯಿಕ ರೀತಿ ವಿಷಯಾಧಾರಿತ ಮತಗಟ್ಟೆಯನ್ನಾಗಿ ಮದ್ದೂರು ವಿಧಾನಸಭಾ ಕ್ಷೇತ್ರದ ಅಣ್ಣೂರನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ಗ್ರಾಮ ಪಂಚಾಯಿತಿಯಿಂದ ರೇಷ್ಮೆ ಕೃಷಿಯಾಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ನೋಡುಗರನ್ನು ಸೆಳೆಯುತ್ತಿದೆ. ಇನ್ನು ಇಲ್ಲಿನ ವಿಶೇಷವೆಂದರೆ ಮತಗಟ್ಟೆಯ ಗೋಡೆಗಳ ಮೇಲೆ ರೇಷ್ಮೆ ಕೃಷಿ ಕುರಿತಂತೆ ಮಾಹಿತಿ ನೀಡಲಾಗಿದೆ. ರೇಷ್ಮೆ ಹುಳು ಸಾಕಾಣಿಕೆ ಮನೆ, ರೇಷ್ಮೆಹುಳುವಿನ ಜೀವನ ಚಕ್ರ, ಮರಗಡ್ಡಿ ಸಾಲು ಸೇರಿದಂತೆ ಹಲವು ಮಾಹಿತಿ ಇದೆ.
ಇದಲ್ಲದೆ ರೇಷ್ಮೆ ಕೃಷಿಯನ್ನು ಪ್ರೋತ್ಸಾಹಿಸುವುದರ ಜತೆಗೆ ಮತದಾನದ ಬಗ್ಗೆಯೂ ಜಾಗೃತಿ ಮೂಡಿಸುವಂತಹ ಸಾಲುಗಳು ಆಕರ್ಷಕವಾಗಿವೆ. ರೇಷ್ಮೆ ನೂಲು ನುಣುಪು ಮತ್ತು ಗಟ್ಟಿ, ಗುಪ್ತ ಮತದಾನ ಸುರಕ್ಷಿತ ಮತ್ತು ಸಮರ್ಥ ಆಯ್ಕೆಗೆ ಸಾಧನ, ಮತದಾನ ಮಾಡಿದವನೇ ಹೀರೋ, ಉತ್ತಮ ಬೆಳೆ ಗುಣಾತ್ಮಕ ಬಿತ್ತನೆಯಿಂದ, ಉತ್ತಮ ಆಡಳಿತ ಯೋಗ್ಯ ಅಭ್ಯರ್ಥಿ ಆಯ್ಕೆಯಿಂದ, ಪ್ರಜಾಪ್ರಭುತ್ವದ ಶಕ್ತಿ ಮತದಾನ ಎಂಬಿತ್ಯಾದಿ ಸಾಲುಗಳನ್ನು ಬರೆಸಲಾಗಿದೆ.