ಬಳ್ಳಾರಿ: ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಕರುನಾಡಿಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಡಿಸಿ ಪವನ್ಕುಮಾರ್ ಮಾಲಪಾಟಿ ಹೇಳಿದರು.
ನಗರದ ಸರ್ಕಾರಿ(ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸೋಮವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಸಾಮ್ರಾಜ್ಯವಾಗಿ ಸುವರ್ಣಯುಗ ಸೃಷ್ಟಿಮಾಡಿ ವಿಶ್ವಪಾರಂಪರಿಕ ತಾಣವಾದ ಹಂಪಿ ನಮ್ಮ ಸಹೋದರ ಜಿಲ್ಲೆಯದು ಎಂಬುದು ನಮಗೆಲ್ಲರಿಗೂ ಹೆಮ್ಮೆ ತರುವ ವಿಷಯ. ಅಲ್ಲದೆ, ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಖನಿಜ ನಿಕ್ಷೇಪ ಹೊಂದಿರುವ ಜಿಲ್ಲೆ ಬಳ್ಳಾರಿ. ಇಲ್ಲಿನ ಭೌತಿಕ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲ ಬಳಸಿಕೊಂಡು ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಲು ಕಂಕಣ ಬದ್ಧರಾಗಿ ಈ ನಾಡನ್ನು ಶ್ರೀಮಂತಗೊಳಿಸೋಣ ಎಂದರು. ಹಿಂಸಾಚಾರ ಮತ್ತು ದ್ವೇಷವನ್ನು ಹತ್ತಿಕ್ಕುವ ಮೂಲಕ ಸರ್ವ ಧರ್ಮ ಸಹಿಷ್ಣುತೆಯನ್ನು ಮೆರೆದು ‘ನಾವೆಲ್ಲರೂ ಒಂದು’ ಎಂಬ ಭಾವದಿಂದ ಶಾಂತಿ ಸಹಬಾಳ್ವೆಯಿಂದ ಬಾಳಿದರೆ ಈ ನಾಡಿಗೆ ಹಿರಿಯರು ಹಾಕಿಕೊಟ್ಟಿರುವ ಭವ್ಯ ಪರಂಪರೆ ಇತರ ರಾಜ್ಯಗಳಿಗೆ ಮಾದರಿಯಾಗಿ ನಿಲ್ಲುತ್ತದೆ ಎಂದರು.
ಅ.28ರಂದು ಹಮ್ಮಿಕೊಂಡಿದ್ದ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ 37,228 ಜನರು ಭಾಗವಹಿಸಿರುವುದು ರಾಜ್ಯದ ಗಮನವನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.
ಎಂಎಲ್ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಾಸಕ ಸೋಮಶೇಖರರೆಡ್ಡಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅದಾವತ್, ಎಡಿಸಿ ಪಿ.ಎಸ್.ಮಂಜುನಾಥ್, ಎಸಿ ಆಕಾಶ್ ಶಂಕರ್ ಮತ್ತಿತರರು ಇದ್ದರು.