ಬಳ್ಳಾರಿ: ನಗರದ ಎಚ್.ಆರ್.ಗವಿಯಪ್ಪ ವೃತ್ತದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರದ ವಿರುದ್ದ ಶೇ.40 ಕಮೀಷನ್ ಆರೋಪಿಸಿ ಪೇಸಿಎಂ ಅಭಿಯಾನ ನಡೆಸಿದರು.
ಅಭಿಯಾನದಲ್ಲಿ ಮಾತನಾಡಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ರಾಜ್ಯ ಸರ್ಕಾರ ಜನರ ಹಣವನ್ನೂ ಕಮಿಷನ್ ರೂಪದಲ್ಲಿ ಕೊಳ್ಳೆಹೊಡೆದಿದೆ. ಇದೂಂದು ಶೇ.40 ಕಮಿಷನ್ ಸರ್ಕಾರ. ಹೀಗಾಗಿ ರಾಜ್ಯಾದ್ಯಂತ ಪೇಸಿಎಂ ಅಭಿಯಾನ ನಡೆಯುತ್ತಿದೆ. ಕಮಿಷನ್ ಬಗ್ಗೆ ನೇರವಾಗಿ ಗುತ್ತಿಗೆ ಸಂಘದ ಅಧ್ಯಕ್ಷರೇ ಆರೋಪ ಮಾಡಿದರೂ ತನಿಖೆ ನಡೆಸಲು ಮುಂದಾಗಿಲ್ಲ. ಆದ್ದರಿಂದ, ಪೋಸ್ಟರ್ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ. ಪೇಸಿಎಂ ಪೊಸ್ಟರ್ ಅಂಟಿಸಿದವರನ್ನು ಬಿಜೆಪಿ ಪ್ರಕರಣ ದಾಖಲಿಸಿ, ಹೆದರಿಸುವ ಕೆಲಸ ಮಾಡುತ್ತಿದೆ. ಆದರೆ, ನಾವು ಯಾರಿಗೂ ಹೆದರುವುದಿಲ್ಲ, ಈ ಅಭಿಯಾನ ನಿರಂತರ ನಡೆಯುತ್ತದೆ ಎಂದರು. ಏಐಸಿಸಿ ಕಾರ್ಯದರ್ಶಿ ಶ್ರೀಧರ್ ಬಾಬು, ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ, ನಾಸೀರ್ ಹುಸೇನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಎಸ್.ಎಲ್.ಸ್ವಾಮಿ, ಮಾಜಿ ಶಾಸಕ ಅನಿಲ್ ಲಾಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮೆಹರೋಜ್ ಖಾನ್, ಆರ್.ಮಂಜುನಾಥ್, ಆಂಜನೇಯಲು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಇತರರಿದ್ದರು.
ಮೀಸಲು ಹೆಚ್ಚಳ ಕುರಿತಾಗಿ ಸಿಹಿಸುದ್ದಿ ಕೊಡುವುದಾಗಿ ಪದೇಪದೆ ಶ್ರೀರಾಮುಲು ಸುಳ್ಳು ಹೇಳುತ್ತಿದ್ದಾರೆ. ಅವರ ಸಿಹಿ ಸುದ್ದಿಯಿಂದ ಎಲ್ಲರಿಗೂ ಶುಗರ್ ಬಂದಿದೆ. ಅವರ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದಿಸುತ್ತಿಲ್ಲ. ಮೀಸಲಾತಿ ಕೊಡಿಸಲು ರಾಮುಲುಗೆ ಶಕ್ತಿ ಇಲ್ಲ. ಅವರು ಅಸಹಾಯಕರಾಗಿದ್ದಾರೆ. ಬೇಕಾದರೆ ಅವರು ಕಾಂಗ್ರೆಸ್ಗೆ ಬರಲಿ. ನಾನು ಸ್ವಾಗತಿಸುವೆ. ಪಪಂ ಮೀಸಲಾತಿಯನ್ನು ಶೇ.7.5 ಹೆಚ್ಚಿಸುವುದಾಗಿ ಶ್ರೀರಾಮುಲು ಭರವಸೆ ನೀಡಿದ್ದರು. ಈ ವಿಚಾರದಲ್ಲಿಎಸ್ಟಿ ಸಮುದಾಯಕ್ಕೆ ಬಿಜೆಪಿ ಮೋಸ ಮಾಡಿದೆ.
| ಬಿ.ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ