ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಕಸದ ಲಾರಿಗಳು ಎಸಗುತ್ತಿರುವ ಅಪಘಾತಕ್ಕೆ ಕಡಿವಾಣ ಬಿದ್ದಂತೆ ಕಾಣುತ್ತಿಲ್ಲ. ಶನಿವಾರ ನಾಗರಬಾವಿ ಸಮೀಪದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಟಿಪ್ಪರ್ ಲಾರಿ ಚಾಲಕ, ಮುಂದೆ ಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮಹಿಳೆ ಮೃತಪಟ್ಟಿದ್ದು, ಪತಿಗೆ ಗಂಭೀರ ಗಾಯಗಳಾಗಿವೆ.
ಮೈಸೂರು ರಸ್ತೆ ಕಸ್ತೂರಬಾ ನಗರದ ನಿವಾಸಿ ವಿಜಯಕಲಾ (37) ಮೃತರು. ಇವರ ಪತಿ ಯೋಗೇಂದ್ರ (41) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 9.30ರಲ್ಲಿ ನಾಗರಬಾವಿ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ನಿಲ್ದಾಣದ ಕಡೆಯಿಂದ ಚಂದ್ರಾ ಲೇಔಟ್ ಕಡೆಗೆ ತೆರಳಲು ನಾಗರಬಾವಿ ಸರ್ಕಲ್ಗೆ ಕಸದ ಲಾರಿ ಬಂದಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ಸಾಗಿದ ಟಿಪ್ಪರ್ ಲಾರಿ ಚಾಲಕ ಮುಂದೆ ಬೈಕ್ನಲ್ಲಿ ಸಾಗುತ್ತಿದ್ದ ದಂಪತಿಗೆ ಗುದ್ದಿದ್ದಾನೆ.
ಕೆಳಗೆ ಬಿದ್ದ ಮಹಿಳೆ ಸೊಂಟದ ಮೇಲೆ ಲಾರಿ ಚಕ್ರ ಸಾಗಿದೆ. ಯೋಗೇಂದ್ರಗೂ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಿಸದೆ ವಿಜಯಕಲಾ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಪಲ್ಟಿಯಾಗಿ ಮಗು ಸಾವು, ತಂದೆ-ತಾಯಿ ಪಾರು: ದೇವಸ್ಥಾನದಿಂದ ಮರಳುತ್ತಿರುವಾಗ ಅಪಘಾತ..
ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದ ರೈತ, ಕಾಲು ಜಾರಿ ಬಾವಿಗೇ ಬಿದ್ದು ಸಾವು!