More

    ಗೀತಾ 10 ಸಲ ನಿಂತ್ರೂ ಗೆಲ್ಲಲ್ಲ!: ಕುಮಾರ್ ಟೀಕಾ ಪ್ರಹಾರ

    ಶಿವಮೊಗ್ಗ: ಈ ಚುನಾವಣೆಯಲ್ಲಿ ಇನ್ನು 10 ಚುನಾವಣೆಯಲ್ಲಿ ನಿಂತ್ರೂ ಗೀತಾ ಗೆಲ್ಲಲ್ಲ. ಹೀಗೆಂದು ಹೇಳಿದ್ದು ಗೀತಾ ಸಹೋದರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ. ಮಾತಿನುದ್ದಕ್ಕೂ ತಮ್ಮ, ತಂಗಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಕುಮಾರ್, ಗ್ರಾಮ ಪಂಚಾಯಿತಿಯಿಂದ ರಾಜಕೀಯ ಆರಂಭಿಸಿದರೂ ಗೀತಾ ಗೆಲ್ಲುವುದಿಲ್ಲ. ದ್ವೇಷ, ಸೇಡು, ಅಹಂಕಾರದ ರಾಜಕಾರಣ ಇಲ್ಲಿ ನಡೆಯಲ್ಲ ಎಂದರು.

    ಮಂಗಳವಾರ ಬಿಜೆಪಿಯಿಂದ ಏರ್ಪಡಿಸಿದ್ದ ವೃತ್ತಿಪರರ ಸಭೆಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಂಗಾರಪ್ಪ ಅವರನ್ನು ತೆಗೆದಿದ್ದೇ ಇವರು. ಮೊದಲು ಬಿಜೆಪಿ, ಬಳಿಕ ಸಮಾಜವಾದಿ ಪಾರ್ಟಿ, ಬಳಿಕ ಜೆಡಿಎಸ್, ಈಗ ಕಾಂಗ್ರೆಸ್ ಹೀಗೆ ಪಕ್ಷದಿಂದ ಪಕ್ಷಕ್ಕೆ ಹಾರಿದರು. ಸಮಾಜವಾದಿ ಪಾರ್ಟಿ, ಜೆಡಿಎಸ್ ಅನ್ನು ಮುಳುಗಿಸಿದರು ಎಂದು ಮಧು ವಿರುದ್ಧ ಹರಿಹಾಯ್ದರು.
    ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನು ಮತ್ತೆ ಪ್ರಾಥಮಿಕ ಶಾಲೆಗೆ ಸೇರಿಸಬೇಕು. ಅಲ್ಲಿ ಮಾತು ಹಾಗೂ ಸಭ್ಯತೆಯನ್ನು ಕಲಿಸಬೇಕು. ಯಾವ ವಿಷಯ ಕೇಳಿದರೂ ಅದು ನನಗೆ ತುಂಬ ಹಿಂದೆಯೇ ಗೊತ್ತು ಎನ್ನುವಂತೆ ಮಾತನಾಡುತ್ತಾರೆ. ಸಚಿವ ಸ್ಥಾನ ಕಾಯಂ ಎಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
    ಚುನಾವಣೆ ಬಂದಾಗ ಕೆಲವರು ಬರುತ್ತಾರೆ. ನಾನೇ ಅಭ್ಯರ್ಥಿ ಎನ್ನುತ್ತಾರೆ. ರಾಜಕೀಯಕ್ಕಾಗಿ ಡಾ. ರಾಜ್‌ಕುಮಾರ್ ಹೆಸರನ್ನೂ ಬಳಕೆ ಮಾಡುತ್ತಾರೆ. ಇವರೊಂದಿಗೆ ಇಡೀ ಕನ್ನಡ ಚಿತ್ರರಂಗವೇನೂ ಇಲ್ಲ. ಯಾರೋ ಒಂದಿಷ್ಟು ಮಂದಿ ಅಭಿಮಾನಕ್ಕಾಗಿ ಬಂದು ಪ್ರಚಾರ ಮಾಡುತ್ತಿದ್ದಾರಷ್ಟೇ. ಸಮಾಜದ ಮತಗಳೆಲ್ಲ ಒಂದೇ ಕಡೆ ಹೋಗುತ್ತವೆ ಎನ್ನುವುದು ತಪ್ಪು ಕಲ್ಪನೆ ಎಂದರು.
    ನಾನು ಸೊರಬ ಶಾಸಕನಾಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ. ಕಳೆದ ಒಂದು ವರ್ಷದಲ್ಲಿ ಕ್ಷೇತ್ರಕ್ಕೆ ನಯಾ ಪೈಸೆ ಬರಲಿಲ್ಲ. ಬಂದಿದ್ದು ಬರಗಾಲ ಮಾತ್ರ. ಅವರದು ನೀತಿಗೆಟ್ಟ ರಾಜಕಾರಣ. ಶರಾವತಿ ಸಂತ್ರಸ್ತರ ಪರವಾಗಿ ಶಿವಮೊಗ್ಗ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರುದ್ರತಾಂಡವ ಮಾಡಿದ್ದರು ಎಂದು ಲೇವಡಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts