More

    ರೈತರಿಗೆ ಗಾಯದ ಮೇಲೆ ಬರೆ

    ರಾಜ್ಯದಲ್ಲಿ ಬಿರುಬೇಸಿಗೆಯ ಬೆನ್ನಲ್ಲೇ ಮುಂಗಾರುಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಇನ್ನೂ 20-25 ದಿನಗಳು ಬಾಕಿ ಇರುವಾಗಲೇ ಈ ಮಳೆ ಬಿದ್ದಿದ್ದು, ಭೂಮಿ ಹದ ಮಾಡಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಹಲವಾರು ಜಿಲ್ಲೆಗಳಲ್ಲಿ ಕೃಷಿಕರು ಉಳುಮೆ ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬೀಜ, ರಸಗೊಬ್ಬರ ಖರೀದಿ ಮಾಡಬೇಕು. ಅದಕ್ಕೆ ಹಣ ಬೇಕು. ಇಂಥ ಸಂದರ್ಭದಲ್ಲಿ ದೇವರೇ ಕಣ್ತೆರೆದಂತೆ, ಕೇಂದ್ರ ಸರ್ಕಾರ ಬರಪರಿಹಾರದ 3454 ಕೋಟಿ ರೂ.ಗಳನ್ನು ಈಗ್ಗೆ ಕೆಲವು ದಿನಗಳ ಹಿಂದೆ ರಾಜ್ಯದ ಬೊಕ್ಕಸಕ್ಕೆ ಸಂದಾಯ ಮಾಡಿದೆ. ಕಾನೂನು ಹೋರಾಟ ಮಾಡಿ ಈ ಹಣವನ್ನು ಪಡೆದ ರಾಜ್ಯ ಸರ್ಕಾರ ಕೂಡ ಹೆಚ್ಚು ಸಮಯ ವ್ಯರ್ಥ ಮಾಡದೇ ಬ್ಯಾಂಕುಗಳ ಮೂಲಕ ರೈತರ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಂಡಿದೆ. ಒಟ್ಟು 33 ಲಕ್ಷಕ್ಕೂ ಹೆಚ್ಚು ರೈತರಿಗೆ ಈ ಹಣವನ್ನು ಬಟವಾಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

    ಈ ಮಧ್ಯೆ, ಬ್ಯಾಂಕ್​ಗಳು ಹಣವನ್ನು ರೈತರಿಗೆ ಪೂರ್ಣ ಪ್ರಮಾಣದಲ್ಲಿ ಸಂದಾಯ ಮಾಡುತ್ತಿಲ್ಲ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಬ್ಯಾಂಕ್​ಗಳು ಹೀಗೆ ಮಾಡಲು ಎರಡು ಕಾರಣಗಳಿವೆ. ಒಂದು, ರೈತರು ಈಗಾಗಲೇ ಅದೇ ಬ್ಯಾಂಕಿನಲ್ಲಿ ಮಾಡಿರುವ ಸಾಲ. ಇನ್ನೊಂದು, ರಾಜ್ಯ ಸರ್ಕಾರ ಈ ಮೊದಲೇ ರೈತರಿಗೆ ನೀಡಿತ್ತು ಎನ್ನಲಾದ 2 ಸಾವಿರ ರೂ. ಮುಂಗಡ ಹಣ. ಪ್ರತಿ ಬಾರಿಯೂ ಕೃಷಿ ಕಾರ್ಯಕ್ಕಾಗಿ ರೈತರು ಬ್ಯಾಂಕ್​ಗಳಲ್ಲಿ ಸಾಲ ಮಾಡುವುದು, ಸಕಾಲಕ್ಕೆ ಅದನ್ನು ಮರುಪಾವತಿ ಮಾಡಲಾಗದೇ ಬಾಕಿ ಉಳಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಕಷ್ಟಪಟ್ಟು ಬೆಳೆ ಬೆಳೆದ ನಂತರವೂ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾಗುವುದರಿಂದ, ಹೂಡಿಕೆ ಮಾಡಿದ ಹಣವೂ ವಾಪಸ್ ಬರದಂತಹ ಸ್ಥಿತಿಯಲ್ಲಿ ಬಹುತೇಕ ರೈತರು ಇದ್ದಾರೆ. ಉತ್ತಮ ರೀತಿಯಲ್ಲಿ ಮಳೆ-ಬೆಳೆಯಾದಾಗ ರೈತರು ಸಾಲ ಮರುಪಾವತಿ ಮಾಡಿಯೇ ಮಾಡಿರುತ್ತಾರೆ. ಕಳೆದ ವರ್ಷ ಬರಗಾಲ ಕಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಬರ ಪರಿಹಾರ ಮಂಜೂರು ಮಾಡಿದೆ. ಆ ಹಣವನ್ನು ಪೂರ್ತಿಯಾಗಿ ರೈತರಿಗೆ ನೀಡಬೇಕಾದದ್ದು ಬ್ಯಾಂಕುಗಳ ಕರ್ತವ್ಯ. ಬಾಕಿ ಇರುವ ಸಾಲಕ್ಕೆ ಹೊಂದಾಣಿಕೆ ಮಾಡುವುದು ಅಕ್ಷಮ್ಯ.

    ಇನ್ನೊಂದೆಡೆ, ಕೇಂದ್ರದ ಹಣ ಬರುವುದು ತಡವಾಯಿತೆಂದು ರಾಜ್ಯ ಸರ್ಕಾರವೇ ರೈತರಿಗೆ ನೀಡಿದ್ದ 2 ಸಾವಿರ ರೂ. ಮುಂಗಡವನ್ನು ಬ್ಯಾಂಕ್​ಗಳು ಈಗ ಮುರಿದುಕೊಳ್ಳುತ್ತಿವೆ ಎನ್ನಲಾಗಿದೆ. ಇದು ಸರಿಯಲ್ಲ. ಬ್ಯಾಂಕಿಂಗ್ ವಲಯದ ಇಂಥ ಅಮಾನವೀಯ ಕ್ರಮಗಳಿಗೆ ರಾಜ್ಯ ಸರ್ಕಾರ ಆಸ್ಪದ ಕೊಡಬಾರದು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ಬ್ಯಾಂಕ್​ಗಳು ಪೂರ್ತಿಯಾಗಿ ರೈತರಿಗೆ ಪಾವತಿಸಬೇಕೆಂದು ರಾಜ್ಯ ಸರ್ಕಾರವೇ ಕಟ್ಟಪ್ಪಣೆ ಮಾಡಬೇಕು. ಜಿಲ್ಲಾಧಿಕಾರಿಗಳ ಮೂಲಕ ಬ್ಯಾಂಕ್​ಗಳಿಗೆ ಸ್ಪಷ್ಟ ನಿರ್ದೇಶನ ಕೊಡಿಸಬೇಕು. ಇದರ ಹೊರತಾಗಿಯೂ ಬ್ಯಾಂಕ್​ಗಳು ರೈತರ ಕಷ್ಟಕ್ಕೆ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts