ಮುಂಬೈ: ಪ್ಲೇಆಫ್ ರೇಸ್ನಿಂದ ಹೊರಬಿದ್ದಿರುವ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್ ಐಪಿಎಲ್-17ರಲ್ಲಿ ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳಿಗೂ ಇದು ಟೂರ್ನಿಯಲ್ಲಿ ಕೊನೇ ಲೀಗ್ ಪಂದ್ಯವಾಗಿದ್ದು, ಗೆಲುವಿನೊಂದಿಗೆ ನಿರ್ಗಮಿಸುವ ತವಕದಲ್ಲಿವೆ.
ನಾಯಕತ್ವ ಬದಲಾವಣೆಯೊಂದಿಗೆ ಕಣಕ್ಕಿಳಿದ ಮುಂಬೈ ತಂಡ ಟೂರ್ನಿಯುದ್ದಕ್ಕೂ ಲಯ ಕಂಡುಕೊಳ್ಳಲು ಪರದಾಡಿದ್ದು, ಮೊದಲ ತಂಡವಾಗಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿತ್ತು. ಮತ್ತೊಂದೆಡೆ ಲಖನೌ ತಂಡ ಕಳೆದ ಪಂದ್ಯದವರೆಗೂ ಪ್ಲೇಆಫ್ ಆಸೆ ಹೊಂದಿತ್ತು. ಆದರೆ ಡೆಲ್ಲಿ ಎದುರು 19 ರನ್ಗಳಿಂದ ಸೋಲು ಕಾಣುವುದರೊಂದಿಗೆ ಕೆಎಲ್ ರಾಹುಲ್ ಬಳಗ ಬಹುತೇಕ ಆಸೆ ಕೈಚೆಲ್ಲಿದೆ. ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 6 ಜಯ, 7 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಲಖನೌಗೆ ಈಗಲೂ 14 ಅಂಕ ಕಲೆಹಾಕುವ ಅವಕಾಶವಿದ್ದರೂ, ಕಳಪೆ ರನ್ರೇಟ್ ಅದರ ಪ್ಲೇಆ್ ಕನಸು ಭಗ್ನಗೊಳಿಸಿದೆ.
ಲಖನೌ ತಂಡದ ಮಾಲೀಕರ ಜತೆಗಿನ ಬಿಸಿಬಿಸಿ ಮಾತುಕತೆಯ ಬಳಿಕ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವ ತೊರೆಯುವ ಬಗ್ಗೆ ವರದಿ ಹರಡಿದ್ದರೂ, ಅದು ಹುಸಿಯಾಗಿದೆ. ಕಳೆದ ಪಂದ್ಯದಲ್ಲಿ ರಾಹುಲ್ ಕೀಪಿಂಗ್ ತ್ಯಜಿಸಿದ್ದರೂ, ಬ್ಯಾಟಿಂಗ್ನಲ್ಲೂ ಹೆಚ್ಚಿನ ಕೊಡುಗೆ ನೀಡಲಿಲ್ಲ. ಟೂರ್ನಿಯಲ್ಲಿ 465 ರನ್ ಗಳಿಸಿದ್ದರೂ, 136.36 ಸ್ಟ್ರೆ$ಕ್ರೇಟ್ ಸಮಾಧಾನಕರ ಎನಿಸಿಲ್ಲ.
ಕೊನೇ ಸ್ಥಾನ ತಪ್ಪಿಸಲು ಹಾರ್ದಿಕ್ ಪಡೆ ಫೈಟ್
ಮುಂಬೈ ತಂಡ 13 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದು 9ರಲ್ಲಿ ಸೋತಿದೆ. ಇದರಿಂದ ಸದ್ಯ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದೆ. ಕೊನೇ ಪಂದ್ಯದಲ್ಲಿ ಗೆದ್ದರೆ ಮುಂಬೈಗೆ ಕೊನೇ ಸ್ಥಾನ ತಪ್ಪಿಸಿಕೊಳ್ಳುವ ಅವಕಾಶವಿದೆ. ಪಂಜಾಬ್ ತನ್ನ ಕೊನೇ ಪಂದ್ಯದಲ್ಲಿ ಸೋತರೆ ಆಗ ಹಾರ್ದಿಕ್ ಪಾಂಡ್ಯ ಪಡೆ ಕನಿಷ್ಠ 9ನೇ ಸ್ಥಾನಕ್ಕಾದರೂ ಏರುವ ಅವಕಾಶ ಹೊಂದಿದೆ. ರೋಹಿತ್ ಶರ್ಮ ನಾಯಕತ್ವ ಕಸಿದು ಹಾರ್ದಿಕ್ ಪಾಂಡ್ಯಗೆ ನೀಡಿದ್ದು ಹಾಲಿ ಋತುವಿನಲ್ಲಿ ಮುಂಬೈಗೆ ಯಾವುದೇ ಲಾಭ ತಂದುಕೊಟ್ಟಿಲ್ಲ. ಜಸ್ಪ್ರೀತ್ ಬುಮ್ರಾ (13 ಪಂದ್ಯಗಳಲ್ಲಿ 20 ವಿಕೆಟ್) ಬಿಗಿ ಬೌಲಿಂಗ್ ದಾಳಿ ನಡೆಸಿದರೂ ಇತರ ಬೌಲರ್ಗಳು ಮತ್ತು ಬ್ಯಾಟರ್ಗಳು ಅಸ್ಥಿರ ನಿರ್ವಹಣೆ ತೋರಿದರು.
ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ಗೇರಿದರೆ ಗಯಾನಾದಲ್ಲಿ ಜೂನ್ 27ರಂದು ಪಂದ್ಯ; ಹೀಗಿದೆ ಕಾರಣ…