More

    ಕಾಂಗ್ರೆಸ್‌ಗೆ ಸಿನಿಮಾ ಕ್ಷೇತ್ರದ ಬೆಂಬಲ

    ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಪರವಾಗಿ ಮತಯಾಚಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘದ ಪದಾಧಿಕಾರಿಗಳು ಹಾಗೂ ಹಲವು ನಟ, ನಟಿಯರು ತೀರ್ಮಾನಿಸಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತಾ ಶಿವರಾಜ್‌ಕುಮಾರ್ ಅಪರೂಪದ ರಾಜಕಾರಣಿ. ಅವರಿಗೊಂದು ಅವಕಾಶ ಬೇಕಿದೆ. ಹೀಗಾಗಿ ಅವರ ಪರವಾಗಿ ಮತ ಕೇಳಲು ಬಂದಿದ್ದೇವೆ ಎಂದರು.
    ಬಂಗಾರಪ್ಪ ನೇರ ನುಡಿಗೆ ಹೆಸರಾದವರು. ಕಾವೇರಿ ಹೋರಾಟದ ಸಂದರ್ಭ ಅವರು ಸುಗ್ರೀವಾಜ್ಞೆ ಪ್ರಕಟಿಸಿದ್ದು ಐತಿಹಾಸಿಕ. ನಾನು ಕನ್ನಡ ಸಂಘಟನೆಯ ಹೋರಾಟಗಾರನಾಗಿದ್ದೆ. ನಮ್ಮ ಹೋರಾಟ ಬೆಂಬಲಿಸಿ ಅವರು ಸುಪ್ರೀಂ ಕೋರ್ಟ್‌ಗೂ ಸೆಡ್ಡು ಹೊಡೆದು ನಿಂತರು. ಗೀತಾ ಶಿವರಾಜ್ ಕುಮಾರ್ ಗೆದ್ದರೆ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
    ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್. ಸುರೇಶ್ ಮಾತನಾಡಿ, ನಾನು ಶಿವಮೊಗ್ಗದವನು. ಗೀತಾ ಅವರಿಗೆ ಬಂಗಾರಪ್ಪನವರ ಗುಣಗಳು ಎರವಲಾಗಿ ಬಂದಿವೆ. ದಿಟ್ಟತನವಿದೆ. ಗೆದ್ದರೆ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂಬ ಭರವಸೆಯಿದೆ ಎಂದರು.
    ಸಚಿವ ಮಧು ಬಂಗಾರಪ್ಪ ಮಾತನಾಡಿ, ಪಕ್ಷಾತೀತವಾಗಿ ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ನಟ, ನಟಿಯರು ಅತ್ಯಂತ ಪ್ರೀತಿಯಿಂದ ಗೀತಕ್ಕ ಅವರನ್ನು ಗೆಲ್ಲಿಸಲು ನಮ್ಮಲ್ಲಿಗೆ ಬಂದಿದ್ದಾರೆ. ಅವರು ಎರಡು ದಿನಗಳ ಕಾಲ ಇಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಪ್ರಮುಖರಾದ ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts