ಬಹರೇನ್: ಬಸವ ಸಮಿತಿ ಬಹರೇನ್ ಆಯೋಜಿಸಿದ 14ನೇ ವಾರ್ಷದ “ಬಸವ ಜಯಂತಿ 2023 ಶರಣ ಹೊಂಗಿರಣ” ಕಾರ್ಯಕ್ರಮ ಇಂಡಿಯನ್ ಕ್ಲಬ್ನಲ್ಲಿ ನೆರವೇರಿತು. ಹೆಸರಾಂತ ವಾಗ್ಮಿ, ಚಿಂತಕ, ಸಾಹಿತಿ ಮತ್ತು ಇತಿಹಾಸ ತಜ್ಞ ಡಾ. ಜಿ.ಬಿ ಹರೀಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗಾಯಕಿ ಕಲಾವತಿ ದಯಾನಂದ ಪುತ್ರನ್ ಮುಖ್ಯ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಸಮಿತಿಯ ಉಪಾದ್ಯಕ್ಷೆ ಹೇಮಾ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಗಾಯಕಿ ಕಲಾವತಿ ಪುತ್ರನ್ ಹಾಗೂ ಸಮಿತಿಯ ಸದಸ್ಯ ನಾಗರಾಜ ಹಡಪದ ಸಂಗೀತ ಕಾರ್ಯಕ್ರಮ ನೀಡಿದರು. ಬಳಿಕ ಬಸವ ಸಮಿತಿಯ ಮಕ್ಕಳಿಂದ ನೃತ್ಯ ಪ್ರದರ್ಶನ ಜರುಗಿತು. ಬಳಿಕ ಸಮಿತಿ ನಡೆದು ಬಂದ ದಾರಿ, ಸಮಿತಿ ಕ್ಯಗೊಳ್ಳುವ ಸಮಾಜಮುಖಿ ಸೇವೆಗಳು ಮತ್ತು ಧೇಯೋದ್ದೇಶಗಳ ಬಗ್ಗೆ ಅಧ್ಯಕ್ಷ ಬಸವರಾಜ ಧೂಳೆಹೊಳೆ ತಿಳಿಸಿದರು. ಇದೇ ವೇಳೆ 2021-22 ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಕಾರ್ಯಕಾರಿಣಿ ಮಂಡಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲ ಕನ್ನಡ ಸಂಘ ಬಹರೈನನ ಮುಖ್ಯಕಾರ್ಯದರ್ಶಿ ಕಿರಣ ಉಪಾಧ್ಯಾಯ ಮಾತನಾಡುತ್ತ ಬಸವಣ್ಣನವರ ಸಪ್ತಶೀಲಗಳ ಮಹತ್ವ ಸಮಾಜಕ್ಕೆ ಎಷ್ಟು ಅವಶ್ಯಕ ಎಂದು ವಿವರಿಸಿದರು. ಇದೇ ವೇಳೆ ಸಮಿತಿಯಿಂದ ಆಯೋಜನೆಗೊಂಡಿದ್ದ ಕ್ರೀಡಾ ಕೂಟಲದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಮಕ್ಕಳು ವೀರರಾಣಿ ಕಿತ್ತೂರು ಚೆನ್ನಮ್ಮನ ಜೀವನದ ವೀರಗಾಥೆಯನ್ನು ಸಾರುವ ನೃತ್ಯರೂಪಕವನ್ನು ಪ್ರದರ್ಶಿಸಿದರು. ಬಳಿಕ ಡಾ. ಜಿ.ಬಿ. ಹರೀಶ್ ಮಾತನಾಡುತ್ತಾ, ಬಸವಾದಿ ಶರಣರ ನಡೆ ನುಡಿಗಳ ಮಹತ್ವ, ನಮ್ಮ ಸಾಂಸ್ಕೃತಿಕ ಬೇರಿನ ಶಕ್ತಿ ಮತ್ತು ವೈಶಾಲ್ಯತೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಸದಸ್ಯರು ವಚನ ಮತ್ತು ಶಿವ ಗೀತೆಗಳಿಗೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.