ಬಳ್ಳಾರಿ: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟ 84 ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ನಗರದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಕೆಎಸ್ಆರ್ಪಿ ಹಾಗೂ ಸಿಸಿಬಿ ಪೊಲೀಸರ ಬಂದೋಬಸ್ತ್ನೊಂದಿಗೆ ರಾಜ್ಯ ಸಾರಿಗೆ ಸಂಸ್ಥೆಯ ಮೂರು ಬಸ್ಗಳಲ್ಲಿ ಆರೋಪಿಗಳನ್ನು ತರಲಾಯಿತು. ಆರೋಪಿಗಳಿದ್ದ ಬಸ್ಗಳ ಬಾಗಿಲುಗಳನ್ನು ಸರಪಳಿ ಸುತ್ತಿ ಬೀಗ ಹಾಕಲಾಗಿತ್ತು. ತಲಾ ಇಬ್ಬರು ಆರೋಪಿಗಳಿಗೆ ಒಂದು ಬೇಡಿ ಹಾಕಿ ತರಲಾಗಿತ್ತು. ಈ ಮೂಲಕ ಆರೋಪಿಗಳು ಪರಾರಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆರೋಪಿಗಳ ಸಂಖ್ಯೆ ಹೆಚ್ಚಿರುವುದು ಹಾಗೂ ಜೈಲು ಇಲಾಖೆಯ ಪ್ರಕ್ರಿಯೆಗಳಿಂದಾಗಿ ಹಂತ ಹಂತವಾಗಿ ಬಸ್ಗಳಿಂದ ಇಳಿಸಿ ಜೈಲಿನೊಳಗೆ ಕರೆದೊಯ್ಯಲಾಯಿತು.
ಬಳ್ಳಾರಿ ಜೈಲಿಗೆ ಬರುವ ಮುನ್ನ ಎಲ್ಲ ಆರೋಪಿಗಳನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರಿಗೂ ಕರೊನಾ ಸೋಂಕು ಇಲ್ಲ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.