ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಬುಧವಾರ ಧ್ವಜಾರೋಹಣದೊಂದಿಗೆ ಅದ್ದೂರಿ ಚಾಲನೆ ದೊರೆತಿದ್ದು, ಕಬ್ಬನ್ ಉದ್ಯಾನದಲ್ಲಿ ಬಿದಿರು ಮರಕ್ಕೆ ‘ಕರಗ ಕೋಡಿ’ ಪೂಜೆ ನೆರವೇರಿಸಲಾಯಿತು.
ಹನ್ನೊಂದು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ನಡೆಯಲಿದ್ದು, ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ನಡೆಸಿಕೊಡಲಿದ್ದಾರೆ. ಕರಗ ಹೊರುವ ಆರ್ಚಕ ಹಾಗೂ ವೀರಕುಮಾರರು ಉಪವಾಸದೊಂದಿಗೆ ವ್ರತ ಆಚರಣೆಯಲ್ಲಿದ್ದಾರೆ.
ಕರಗ ಅಂಗವಾಗಿ ತಿಗಳ ಸಮುದಾಯದ ಕುಲದೇವತೆ ದ್ರೌಪದಿ ದೇವಿಗೆ ಆಭರಣಗಳನ್ನು ತೊಡಿಸಿ ಅಲಂಕರಿಸಲಾಗಿದೆ. ದ್ರೌಪದಿ ಮತ್ತು ಧರ್ಮರಾಯಸ್ವಾಮಿ ದೇವಾಲಯಗಳ ಒಳಾಂಗಣಗಳನ್ನು ಹೂವು, ತಳಿರು, ತೋರಣಗಳಿಂದ ಅಲಂಕರಿಸಲಾಗಿದೆ. ಜತೆಗೆ ಒಳ ಹಾಗೂ ಹೊರಾಂಗಣದಲ್ಲಿ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ದೇವಾಲಯ ಕಂಗೊಳಿಸುತ್ತಿದೆ. ಮಲ್ಲಿಗೆ ಹೂವಿನ ಪರಿಮಳ ಎಲ್ಲೆಡೆ ಬೀರುತ್ತಿದೆ.
ಇದನ್ನೂ ಓದಿ: 215 ಹೊಸ ಕೋವಿಡ್ ಪ್ರಕರಣಗಳು ದೃಢ; ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ
ಉತ್ಸವ ಪ್ರಯುಕ್ತ ಧರ್ಮರಾಯಸ್ವಾಮಿ ಬೀದಿ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಮನೆ, ಮನೆಗಳಲ್ಲಿ ಪೂಜೆ ನಡೆಯುತ್ತಿದೆ. ಕುಲ ಬಾಂಧವರ ಬಂಧು-ಬಳಗದವರು ಹಬ್ಬಕ್ಕೆ ಆಗಮಿಸುತ್ತಿದ್ದಾರೆ.
ಕರಗ ಶಕ್ತ್ಯೋತ್ಸವ
ಚೈತ್ರ ಪೌರ್ಣಿಮೆಯ (ಏ. 6ರಂದು) ಬೆಳದಿಂಗಳ ಬೆಳಕಲ್ಲಿ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಅಂದು ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.